ಹಳೇಬೀಡು: ಗ್ರಾಮಗಳಲ್ಲಿ ಹೊಂದಾಣಿಕೆಯಿಂದ ಬದುಕು ಸಾಗಿಸಿದರೆ ಗ್ರಾಮೀಣ ಅಭಿವೃದ್ಧಿಗೆ ಅನುಕೂಲ ಆಗುತ್ತದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.
ಹಳೇಬೀಡು ಸಮೀಪದ ಅಡಗೂರು ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗುರುವಾರ ಹಾಸನ ಆಕಾಶವಾಣಿ ಕೇಂದ್ರದಿಂದ ನಡೆದ ಹಳ್ಳಿ ಧ್ವನಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆರೆಗಳ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಬದ್ಧವಾಗಿದೆ. ಸ್ಥಳೀಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ನರೇಗಾ ಯೋಜನೆಯಲ್ಲಿ ರೈತರು ಕೃಷಿಗೆ ಸಂಬಂಧಿಸಿದ ಹಾಗೂ ನೀರು ಸಂರಕ್ಷಣೆ ಕೆಲಸಗಳನ್ನು ಮಾಡಿಕೊಳ್ಳಬೇಕು. ಅಡಗೂರಿನ ಸರ್ಕಾರಿ ಆಸ್ಪತ್ರೆ ಹಾಗೂ ಪ್ರೌಢಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯ ಸಭೆಯಲ್ಲಿ ಕ್ರಿಯಾ ಯೋಜನೆ ರೂಪಿಸಲು ಪಿಡಿಒ ನೆರವಾಗಬೇಕು . ಎತ್ತಿನಹೊಳೆ ಯೋಜನೆ ಕಾಮಗಾರಿಯ ಬೃಹತ್ ವಾಹನ ಸಂಚಾರದಿಂದ ಜಖಂ ಆಗಿರುವ ಡಾಣಾಯಕನ ಕೆರೆ ಏರಿ ದುರಸ್ತಿಗೆ ಎಂಜಿನಿಯರ್ ತಕ್ಷಣ ಕ್ರಮ ಕೈಗೊಳ್ಳಬೇಕು. ಕಂದಾಯ ಜಮೀನುಗಳ ಖಾತೆ ಅರ್ಜಿ ವಿಲೇವಾರಿ ಮಾಡಿಬೇಕು ಎಂದು ಸೂಚಿಸಿದರು. ಖಾತೆ ಮಾಡಲು ತೊಡಕಾದರೆ ಹಿಂಬರಹ ಕೊಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಆಕಾಶವಾಣಿ ನಡೆಸುವ ಹಳ್ಳಿ ಧ್ವನಿ ಯಿಂದ ಹಳ್ಳಿಯ ಸಮಸ್ಯೆಗಳಿಗೆ ಸ್ಪಂದನೆ ದೊರಕುತ್ತದೆ. ಅಡಗೂರು ಪ್ರೌಢಶಾಲೆಯ ಮೈದಾನಕ್ಕೆ ಕಾಂಪೌಂಡ್ ನಿರ್ಮಾಣಕ್ಕೆ ಕೈಗೊಳ್ಳುತ್ತೇವೆ ಎಂದರು.
ಹಾಸನ ಆಕಾಶವಾಣಿ ಮುಖ್ಯಸ್ಥ ಡಾ.ವಿಜಯ್ ಅಂಗಡಿ ನೇತೃತ್ವ ವಹಿಸಿದ್ದರು. ರಂಗಭೂಮಿ ಕಲಾವಿದ ಅಡಗೂರು ವಿಶ್ವನಾಥಯ್ಯ ಸಾಧಕರನ್ನು ಪರಿಚಯಿಸಿದರು. ನಿವೃತ್ತ ಗ್ರಾಮ ಸೇವಕ ಎ.ಎಸ್.ರಂಗಯ್ಯ ಸಮಸ್ಯೆಗಳನ್ನು ವಿವರಿಸಿದರು. ಗ್ಯಾರಂಟಿ ರಾಮಣ್ಣ ತಂಡದವರು ಗ್ರಾಮದ ಇತಿಹಾಸವನ್ನು ಹಾಡಿ ತಿಳಿಸಿದರು. ನಿವೃತ್ತ ಗ್ರಾಮಲೆಕ್ಕಾಧಿಕಾರಿ ನಾಗರಾಜೇಗೌಡ, ಪ್ರಮುಖರಾದ ವಿಜಯ್ ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಎ.ಎಸ್.ಆನಂದ್, ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆಲದಹಳ್ಳಿ ಕೃಷ್ಣೇಗೌಡ, ರೈತ ಹೋರಾಟಗಾರ ವಿಜಯ್ ಕುಮಾರ್ ಮುತ್ತಯ್ಯ, ಪ್ರಾಧ್ಯಾಪಕ ಶಿವಕುಮಾರ್, ಪ್ರಾಧ್ಯಾಪಕಿ ದೀಪಶ್ರೀ, ಆಕಾಶವಾಣಿ ಉದ್ಘೋಷಕ ಪುಟ್ಟಸ್ವಾಮಿ ಬಿ.ತರೀಕೆರೆ, ರೈತರಾದ ಎಸ್.ಎನ್.ಯೋಗೀಶಪ್ಪ, ಚೇತನ್ ಗುರೂಜಿ, ಧರಣೇಂದ್ರ, ಚಂದ್ರೇಗೌಡ, ಉಪತಹಶಿಲ್ದಾರ್ ಮಹೇಂದ್ರ, ಪಿಡಿಒ ಸುಮಂತ್ ಇದ್ದರು.
ಆಕಾಶವಾಣಿಯ ಹಳ್ಳಿ ಧ್ವನಿ ಕೇಳಿದ್ದರಿಂದ ನಮ್ಮೂರಿನ ಇತಿಹಾಸ ಕಲೆ ಸಂಸ್ಕೃತಿಯ ಇತಿಹಾಸದ ಪರಿಚಯ ಆಯಿತು. ಅಡಗೂರಿನ ಮಹತ್ವ ಗೊತ್ತಾಯಿತು. ಅಡಗೂರು.-ನಾಗರಾಜೇಗೌಡ, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.