ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪರೇಷನ್‌ ಒಂಟಿ ಸಲಗ

ಮತ್ತಿಗೋಡು, ದುಬಾರೆಯಿಂದ ಬಂದ ಐದು ಕುಮ್ಕಿ ಆನೆಗಳು
Last Updated 28 ಜುಲೈ 2019, 4:52 IST
ಅಕ್ಷರ ಗಾತ್ರ

ಹಾಸನ: ತಿಂಗಳ ಅವಧಿಯಲ್ಲಿ ಎರಡು ಬಾರಿ ಹಾಸನ ನಗರದೊಳಗೆ ನುಗ್ಗಿ ಆತಂಕ ಮೂಡಿಸಿದ್ದಲ್ಲದೇ ಇಬ್ಬರನ್ನು ಬಲಿ ಪಡೆದ ಒಂಟಿ ಸಲಗ ಸೆರೆ ಕಾರ್ಯಾಚರಣೆಗೆ ಭಾನುವಾರ ಚಾಲನೆ ದೊರೆಯಲಿದೆ.

ಒಂಟಿ ಕೊಂಬಿನ ಗಂಡಾನೆ ಹಿಡಿಯುವ ಸಲುವಾಗಿ ದುಬಾರೆ ಮತ್ತು ಮತ್ತಿಗೋಡು ಶಿಬಿರದಿಂದ ಕುಮ್ಕಿ ಆನೆಗಳಾದ ಅಭಿಮನ್ಯು, ಹರ್ಷ, ಅಜಯ, ವಿಕ್ರಮ್‌, ಕೃಷ್ಣನನ್ನು ಲಾರಿಯಲ್ಲಿ ತರಲಾಗಿದ್ದು, ಪ್ರಸ್ತುತ ಆನೆಗಳನ್ನು ಸೀಗೆಗುಡ್ಡ ಮೀಸಲು ಅರಣ್ಯದಲ್ಲಿ ಇರಿಸಲಾಗಿದೆ.

‘ಸೀಗೆಗುಡ್ಡ ಅರಣ್ಯದಲ್ಲಿ ಬೀಡುಬಿಟ್ಟಿರುವ ಒಂಟಿ ಸಲಗದ ಚಲನವಲನಗಳನ್ನು ಗಮನಿಸಲಾಗುತ್ತಿದೆ. ಐದು ಕುಮ್ಕಿ ಆನೆಗಳು ಹಾಗೂ ವೈದ್ಯರನ್ನು ಸಹ ಕರೆಸಲಾಗಿದೆ. ಆನೆ ಸೆರೆಗೆ ಬೇಕಾದ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಅನುಕೂಲಕರ ವಾತಾವರಣ ನೋಡಿಕೊಂಡು ಭಾನುವಾರ ಬೆಳಿಗ್ಗೆಯಿಂದಲೇ ಆಪರೇಷನ್‌ ಒಂಟಿ ಸಲಗ ಕಾರ್ಯಾಚರಣೆ ಆರಂಭಿಸಲಾಗುವುದು. ಸೆರೆಸಿಕ್ಕ ಬಳಿಕ ಮತ್ತಿಗೋಡು ಆನೆ ಶಿಬಿರಕ್ಕೆ ಬಿಡಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು ‘ಪ‍್ರಜಾವಾಣಿ’ಗೆ ತಿಳಿಸಿದರು.

ಬೇಲೂರು ಹಾಗೂ ಹಾಸನ ತಾಲ್ಲೂಕುಗಳಲ್ಲಿ ದಾಂಧಲೇ ನಡೆಸುತ್ತಿದ್ದ ಒಂಟಿ ಸಲಗ ಸಾಕಷ್ಟು ಬೆಳೆ ಹಾನಿಗೆ ಕಾರಣವಾಗಿತ್ತು. ಉಪಟಳಕ್ಕೆ ಬೇಸತ್ತ ಜನರು ಮನೆಯಿಂದ ಹೊರಬರಲು ಹಾಗೂ ಜಮೀನಿಗೆ ಹೋಗಲು ಭಯ ಪಡುತ್ತಿದ್ದರು.

ಒಂಟಿ ಕೊಂಬಿನ ಸಲಗ ಜೂನ್‌ 19ರಂದು ಬೇಲೂರು ತಾಲ್ಲೂಕಿನ ದೇವರಹಳ್ಳಿಯಲ್ಲಿ ಪುಷ್ಪಾ (40) ಎಂಬುವರನ್ನು ತುಳಿದು ಹತ್ಯೆ ಮಾಡಿತ್ತು. ಅದಾದ ಬಳಿಕ ಜುಲೈ 23ರಂದು ಶಿವಪುರ ಕಾವಲು ಅರಣ್ಯದಲ್ಲಿ ಅರಣ್ಯರಕ್ಷಕ ಅಣ್ಣೇಗೌಡ (53) ಅವರನ್ನು ಬಲಿ ಪಡೆದಿತ್ತು.

ಅಲ್ಲದೇ ಜುಲೈ 6ರಂದು ಹಾಸನದ ಹುಣಸಿನ ಕೆರೆಯಲ್ಲಿ ಪ್ರತ್ಯಕ್ಷವಾಗಿದ್ದ ಆನೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಸಂಚರಿಸಿ ಆತಂಕ ಮೂಡಿಸಿತ್ತು. ರಾತ್ರಿ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ‌ ನಡಸಿ ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದರು.

ಆದರೆ, ಜುಲೈ 23ರಂದು ಬೆಳಗಿನ ಜಾವ ಹಾಸನ ನಗರದೊಳಗೆ ಮತ್ತೆ ಬಂದ ಈ ಆನೆ ಉದ್ದೂರು ಕೆರೆ, ಪಿಎನ್ ಟಿ ಕಾಲೋನಿ, ಜವೇನಹಳ್ಳಿ ಮಠದ ಬಳಿ ಓಡಾಡಿ ಭಯ ಮೂಡಿಸಿತ್ತು. ಬಡಾವಣೆಯ ನಿವಾಸಿಗಳು ಗಾಢ ನಿದ್ರೆಗೆ ಜಾರಿದ್ದರಿಂದ ಯಾವುದೇ ಅಪಾಯ ಸಂಭವಿಸಿರಲಿಲ್ಲ.

ಸಲಗ ಬಂದಿರುವ ಸುದ್ದಿ ಕೇಳಿ ಎಚ್ಚೆತ್ತ ಕೆಲವರು, ಭಯದಿಂದ ಜಾಗರಣೆ ಮಾಡಿದ್ದರು. ಕತ್ತಲು ಕಳೆಯುವವರೆಗೂ ಟಾರ್ಚ್ ಹಿಡಿದುಕೊಂಡು ಸಲಗನ ಬೆನ್ನಟ್ಟಿದ ಅರಣ್ಯಾಧಿಕಾರಿಗಳು, ಸಿಬ್ಬಂದಿ ಮತ್ತು ಪೊಲೀಸರು, ಬೆಳಗಾಗುತ್ತಿದ್ದಂತೆಯೇ ಉದ್ದೂರು, ಶಂಖ, ಅತ್ತಿಹಳ್ಳಿ, ಇಬ್ದಾಣೆ ಮೂಲಕ ಸೀಗೆಗುಡ್ಡ ಮೀಸಲು ಅರಣ್ಯಕ್ಕೆ ಅಟ್ಟಿದ್ದರು. ಈ ಕಾರ್ಯಾಚರಣೆಯಲ್ಲಿಯೇ ಅರಣ್ಯ ರಕ್ಷಕ ಬಲಿಯಾಗಿದ್ದರು.

‘ಒಂಟಿ ಸಲಗನಿಗೆ ಅಂಕುಶ ಹಾಕದಿದ್ದರೆ ಸಾವು-ನೋವು ಸಂಭವಿಸುತ್ತದೆ. ಆನೆ ಹಾವಳಿ ತಡೆಯಲು ಅರಣ್ಯ ಇಲಾಖೆ ವಿಫಲವಾಗಿದೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಹಾಗಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ಸಲಗ ಸೆರೆ ಹಿಡಿಯಲು ಅನುಮತಿ ಕೋರಿ ಸಲ್ಲಿಸಿದ್ದ ಪ್ರಸ್ತಾವಕ್ಕೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನುಮತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT