ರಾತ್ರೋರಾತ್ರಿ ತಾಲ್ಲೂಕು ಕಚೇರಿ ನೆಲಸಮ: ಶಾಸಕ ಎಚ್.ಡಿ.ರೇವಣ್ಣ ವಿರೋಧ

ಹಾಸನ: ಜೆಡಿಎಸ್ ನಾಯಕರ ವಿರೋಧದ ನಡುವೆಯೂ ನಗರದ ತಾಲ್ಲೂಕು ಕಚೇರಿ ಕಟ್ಟಡವನ್ನು ಶನಿವಾರ ರಾತ್ರಿ ನೆಲಸಮ ಮಾಡಲಾಗಿದೆ.
ನಗರದ ಬಿ.ಎಂ. ರಸ್ತೆಯಲ್ಲಿರುವ ತಹಶೀಲ್ದಾರ್ ಕಚೇರಿ ಮತ್ತು ಪಕ್ಕದ ಹೆದ್ದಾರಿ ವಿಶೇಷ ಭೂಸ್ವಾಧೀನ ಕಚೇರಿ ಕಟ್ಟಡವನ್ನು ಜೆಸಿಬಿ ಬಳಸಿ ಧ್ವಂಸಗೊಳಿಸಲಾಗಿದೆ. ಈ ಜಾಗದಲ್ಲಿ ₹ 10 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಶಾಸಕ ಪ್ರೀತಂ ಗೌಡ ಯೋಜನೆ ರೂಪಿಸಿದ್ದಾರೆ.
ಈಗಾಗಲೇ ತಾಲ್ಲೂಕು ಕಚೇರಿ ಆಡಳಿತವನ್ನು ವಿದ್ಯಾನಗರದ ಜಿಲ್ಲಾ ತರಬೇತಿ ಕೇಂದ್ರದ ಎದುರು ಹಾಸ್ಟೆಲ್ಗೆ ಸ್ಥಳಾಂತರಿಸಲಾಗಿದೆ.
ಹಾಸನದಲ್ಲಿ ಹಳೆ ತಾಲ್ಲೂಕು ಕಚೇರಿ ಕೆಡವಿ ನೂತನವಾಗಿ ನಿರ್ಮಿಸುವುದು ಮತ್ತು ಟ್ರಕ್ ಟರ್ಮಿನಲ್ ಕಾಮಗಾರಿಯನ್ನು ಶಾಸಕ ಎಚ್.ಡಿ. ರೇವಣ್ಣ ವಿರೋಧಿಸುತ್ತಲೇ ಬಂದಿದ್ದರು. ಒಂದು ಹಂತದಲ್ಲಿ ಟ್ರಕ್ ಟರ್ಮಿನಲ್ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲೂ ರೇವಣ್ಣ ಯಶಸ್ವಿಯಾಗಿದ್ದರು.
ಟ್ರಕ್ ಟರ್ಮಿನಲ್ ಪ್ರಹಸನ ಬಳಿಕ ಕೆಲವೇ ತಾಸುಗಳಲ್ಲಿ ತಾಲ್ಲೂಕು ಕಚೇರಿ ಕಟ್ಟಡವನ್ನು ಕೆಡವಲಾಗಿದೆ. ಇದು ಬಿಜೆಪಿ–ಜೆಡಿಎಸ್ ಜಟಾಪಟಿಗೆ ನಾಂದಿ ಹಾಡಿದೆ.
ನಗರದ ಹೊರವಲಯದ ಕೆಂಚಟ್ಟಹಳ್ಳಿಯಲ್ಲಿ ಆರಂಭವಾಗಿರುವ ಟ್ರಕ್ ಟರ್ಮಿನಲ್ ನಿರ್ಮಾಣ ಕಾಮಗಾರಿ ಜೆಡಿಎಸ್–ಬಿಜೆಪಿ ರಾಜಕೀಯ ಮೇಲಾಟಕ್ಕೆ ವೇದಿಕೆಯಾಗಿದ್ದು, ಶನಿವಾರ ಶಾಸಕ ಎಚ್.ಡಿ.ರೇವಣ್ಣ ಅವರು ಹೇಮಗಂಗೋತ್ರಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಜತೆ ಧರಣಿ ನಡೆಸಿ ಕೆಲಸಕ್ಕೆ ತಡೆಯೊಡ್ಡಿದ್ದರು.
ಈ ವೇಳೆ ಜೆಡಿಎಸ್– ಬಿಜೆಪಿ ಕಾರ್ಯಕರ್ತರು ಪರಸ್ಪರ ವಾಗ್ವಾದಕ್ಕಿಳಿದಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಟ್ರಕ್ ಟರ್ಮಿನಲ್ ವಿಚಾರವಾಗಿ ಬೆಳಿಗ್ಗೆಯಿಂದ ಸಂಜೆವರೆಗೂ ನಡೆದ ಪ್ರತಿಭಟನೆ, ಕಾಮಗಾರಿಗೆ ತಡೆ, ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ನಡುವಿನ ಜಟಾಪಟಿ ನಿಯಂತ್ರಿಸಲು ಜಿಲ್ಲಾಧಿಕಾರಿ ಆರ್.ಗಿರೀಶ್ ನಿಷೇಧಾಜ್ಞೆ ಅಸ್ತ್ರ ಪ್ರಯೋಗಿಸುವ ಮೂಲಕ ಸಂಘರ್ಷಕ್ಕೆ ತಾತ್ಕಾಲಿಕ ಅಂತ್ಯ ಹಾಡಿದರು. ಇದು ಮೇಲ್ನೋಟಕ್ಕೆ ರೇವಣ್ಣ ಅವರ ಪ್ರತಿರೋಧಕ್ಕೆ ಜಯ ದೊರೆಂತಂತಾಯಿತು.
ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ಘರ್ಷಣೆ, ರೇವಣ್ಣ ಧರಣಿ ನಡೆಸಿರುವ ಬಗ್ಗೆ ಮುಖ್ಯಮಂತ್ರಿ ಕಚೇರಿ ಜಿಲ್ಲಾಡಳಿತದಿಂದ ಶನಿವಾರ ಸಂಜೆ ಮಾಹಿತಿ ಪಡೆದಿತ್ತು. ಹಿರಿಯ ಅಧಿಕಾರಿಗಳು ಟ್ರಕ್ ಟರ್ಮಿನಲ್ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದ ಬಳಿಕ ತಾತ್ಕಾಲಿಕ ಪರಿಹಾರವಾಗಿ ಕಾಮಗಾರಿ ನಿಲ್ಲಿಸಲು ಸೂಚನೆ ನೀಡಿದರು ಎನ್ನಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.