ಹೊಳೆನರಸೀಪುರ: ಕೇವಲ ಘೋಷಣೆ ಗಳಿಂದ ರೈತರ ಉದ್ಧಾರ ಅಸಾಧ್ಯ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಲಭಿಸಿ, ಶ್ರಮಕ್ಕೆ ಪ್ರತಿಫಲ ದೊರೆತು ಅವರ ಸಮಸ್ಯೆ ಬಗೆಹರಿಸಿದರೆ ಮಾತ್ರ ರೈತರ ಆತ್ಮಹತ್ಯೆ ತಡೆಗಟ್ಟಬಹುದು ಎಂದು ಡಿ.ವೈ.ಎಸ್.ಪಿ ಲಕ್ಷ್ಮೇಗೌಡ ತಿಳಿಸಿದರು.
ಪಟ್ಟಣದ ಸರ್ಕಾರಿ ಗೃಹ ವಿಜ್ಞಾನ ಮಹಿಳಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ’ದ ಆನ್ ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಟ್ಟಣದ ಸೇರಿದ್ದ ಅನೇಕರು ಕೊರೊನಾ ಭೀತಿಯಿಂದ ಮತ್ತೆ ಹಳ್ಳಿಗಳಿಗೆ ಬಂದು ಬೇಸಾಯದಲ್ಲಿ ತೊಡಗಿಕೊಂಡಿದ್ದಾರೆ. ಯುವ ಜನರು ಕೃಷಿ ಕ್ಷೇತ್ರಕ್ಕೆ ಕಾಲಿಟ್ಟಿರುವುದು ಉತ್ತಮ ಬೆಳವಣಿಗೆ. ಇಂಥ ಯುವಕರಿಗೆ ಸೂಕ್ತ ಮಾರ್ಗದರ್ಶನ, ಗೌರವ, ಮನ್ನಣೆ ದೊರೆತು ಬೆಳೆದ ಬೆಳೆಗೆ ಉತ್ತಮ ಬೆಲೆ ಲಭಿಸಿದರೆ ಕೃಷಿಯನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳುತ್ತಾರೆ. ಇಂಥ ಪರಿಸ್ಥಿತಿ ನಿರ್ಮಾಣ ಆದಾಗ ರೈತರ ಆತ್ಮಹತ್ಯೆ ನಿಲ್ಲುತ್ತದೆ ಎಂದರು.
ಅತಿಯಾದ ಕೆಲಸದ ಒತ್ತಡದಿಂದ ಪೋಷಕರು ತಮ್ಮ ಮಕ್ಕಳಿಗೆ ಸಮಯ ನೀಡಲು ಸಾಧ್ಯ ಆಗುತ್ತಿಲ್ಲ. ಅವರು ಕಿಳರಿಮೆಗೆ ಒಳಗಾಗದಂತೆ ಧೈರ್ಯ ತುಂಬುವವರೂ ಇಲ್ಲ. ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಬದುಕೇ ಇಲ್ಲ ಎನ್ನುವ ಭಾವನೆ ಸರಿಯಲ್ಲ ಎಂದರು.
ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿ.ಎಸ್.ಕೃಷ್ಣಮೂರ್ತಿ ಮಾತನಾಡಿ, ಆತ್ಮವಿಶ್ವಾಸ ವೃದ್ಧಿಸುವ ಮಾತುಗಳಿಂದ ಖಿನ್ನತೆಗೆ ಒಳಗಾದವರಲ್ಲಿ ಧೈರ್ಯ ತುಂಬಬಹುದು ಎಂದರು.