ಹಾಸನ: ಐಎಂಎ ಹಗರಣದಲ್ಲಿನ ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಜೆಡ್. ಜಮೀರ್ ಅಹಮ್ಮದ್ ಖಾನ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿರುವುದನ್ನು ಖಂಡಿಸಿ ಕಾರ್ಯಕರ್ತರು ಗುರುವಾರ ಸಂಜೆ ರಸ್ತೆತಡೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಭವನದ ಎದುರು ಕೆಪಿಸಿಸಿ ಸದಸ್ಯ ಎಚ್.ಕೆ.ಮಹೇಶ್ ನೇತೃತ್ವದಲ್ಲಿಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಕೂಗಿದರು.
ಜಮೀರ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿನಡೆಸಿರುವುದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ. ಮುಂಜಾನೆ ನಾಲ್ಕು ಗಂಟೆಯಿಂದ ಜಮೀರ್ ಮನೆ ಹಾಗೂ ಕಚೇರಿ ಪರಿಶೀಲನೆ ನಡೆಸಲಾಗಿದೆ. ಹಳೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲೆ ಮತ್ತು ಉತ್ತರವನ್ನು ನೀಡಿದ್ದರೂ ದುರುದ್ದೇಶಪೂರ್ವಕವಾಗಿ ದಾಳಿ ಮಾಡಲಾಗಿದೆ ಎಂದು ಆರೋಪಿಸಿದರು.
ಜಮೀರ್ ಬೆಳವಣಿಗೆಯನ್ನು ಸಹಿಸದೇ ಅಲ್ಪ ಸಂಖ್ಯಾತ ನಾಯಕನನ್ನು ಮುಗಿಸುವಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಜಾರಿ ನಿರ್ದೇಶನಾಲಯ ಮತ್ತು ಆದಾಯತೆರಿಗೆ ಇಲಾಖೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೈಗೊಂಬೆ ಆಗಿವೆ. ಎರಡೂಸರ್ಕಾರ ಸೇರಿ ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿ ಮಾಡುವ ಕೆಲಸ ಮಾಡಿಸುತ್ತಿವೆ ಎಂದು ದೂರಿದರು.
ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೂ ಇ.ಡಿ ಅಧಿಕಾರಿಗಳು ದಾಳಿನಡೆಸಿದ್ದರು. ಅವರಿಗೆ ಕೊಟ್ಟ ಎಲ್ಲ ತೊಂದರೆಗಳನ್ನು ಸಹಿಸಿಕೊಂಡರು. ಇದಕ್ಕೆಲ್ಲಾಜಮೀರ್ ಯಾವುದಕ್ಕೂ ಭಯ ಪಡುವುದಿಲ್ಲ. ಎಲ್ಲಾ ದಾಖಲಾತಿಗಳನ್ನು ತನಿಖಾ ಸಂಸ್ಥೆ ಎದುರು ಹಾಜರು ಪಡಿಸಲಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಶು ಆಸಿಫ್, ರಂಜಿತ್ ಗೊರೂರು,ವಿನೋದ್ ಇದ್ದರು.