ಹೆತ್ತೂರು: ಹೋಬಳಿಯ ಹೊಂಗಡಹಳ್ಳ ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿ ವನಜಾಕ್ಷಿ ಆಯ್ಕೆಯಾಗಿದ್ದು, ತಾಂತ್ರಿಕ ಅಡಚಣೆಯ ಹಿನ್ನೆಲೆ ಅಧಿಕೃತ ಘೋಷಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಚುನಾವಣಾ ಅಧಿಕಾರಿ ಆದಿತ್ಯ, ‘ಚುನಾವಣೆಗೆ ವನಜಾಕ್ಷಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಆರು ಸದ್ಯಸರಲ್ಲಿ ಕೋರಂಗೆ ಮೂವರು ಸದಸ್ಯರ ಅಗತ್ಯವಿತ್ತು. ಆದರೆ ಇಬ್ಬರು ಮಾತ್ರ ಹಾಜರಿದ್ದರು. ಅರ್ಧ ಗಂಟೆ ಹೆಚ್ಚುವರಿಯಾಗಿ ಸಮಯ ನೀಡಲಾಯಿತು. ಆದರೆ ಯಾರೂ ಬಾರದೇ ಇರುವುದರಿಂದ ಸೋಮವಾರ ಮತ್ತೆ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಭ್ಯರ್ಥಿಯ ಆಯ್ಕೆಯನ್ನು ಘೋಷಣೆ ಮಾಡಲಾಗುವುದು. ಜೊತೆಗೆ ಸೋಮವಾರ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ’ ಎಂದು ತಿಳಿಸಿದರು.
ನಿಯೋಜಿತ ಅಧ್ಯಕ್ಷೆ ವನಜಾಕ್ಷಿ ಮಾತನಾಡಿ, ‘ಇಂದು ನನ್ನ ಅಧ್ಯಕ್ಷ ಸ್ಥಾನದ ಆಯ್ಕೆಯ ಅಧಿಕೃತ ಘೋಷಣೆ ಆಗಬೇಕಾಗಿತ್ತು. ಇದಕ್ಕೆ ಅಡಚಣೆ ಆಗಿದೆ. ನಾನು ದಲಿತ ಮಹಿಳೆಯಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಏರುವುದನ್ನು ನೋಡಲು ಸಾಧ್ಯವಾಗದ ರೀತಿಯ ಮನಸ್ಥಿತಿಯನ್ನು ಸದಸ್ಯರು ಹೊಂದಿದ್ದಾರೆ’ ಎಂದು ದುಃಖ ತೊಡಿಕೊಂಡರು.
ಕಾಂಗ್ರೆಸ್ ಮುಖಂಡ ಬಾಚಳ್ಳಿ ಪ್ರತಾಪ್ ಗೌಡ ಮಾತನಾಡಿ, ‘ಹೊಂಗಡಹಳ್ಳ ಇತಿಹಾಸದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಸಿಕ್ಕಿದೆ. ಇದನ್ನು ಸಹಿಸದವರು ಗೈರು ಹಾಜರಾಗಿದ್ದಾರೆ. ಆದರೆ ಸೋಮವಾರ ಅಧಿಕೃತವಾಗಿ ಘೋಷಣೆ ಆಗಲಿದೆ. ಹೊಂಗಡಹಳ್ಳ ಅಭಿವೃದ್ಧಿಯಲ್ಲಿ ಹಿಂದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುತ್ತೇನೆ’ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯೆ ಸುಜಾತಾ, ಮಹಿಳಾ ಕಾಂಗ್ರೆಸ್ ಸದಸ್ಯೆ ಲಕ್ಷ್ಮಿ, ಕಿರಣ್, ಕೃಷ್ಣೇಗೌಡ, ಮಂಜು, ವಿಜಯ್ ಉಪಸ್ಥಿತರಿದ್ದರು.