ಹಾವೇರಿ: ಭಾರತ ಚುನಾವಣಾ ಆಯೋಗದ ವಿವಿ ಪ್ಯಾಟ್ ಹಾಗೂ ವಿದ್ಯುನ್ಮಾನ ಮತಯಂತ್ರ (ಇ.ವಿ.ಎಂ)ಗಳ ದಾಸ್ತಾನಿಗೆ ಅಗತ್ಯವಾದ ನೂತನ ಗೋದಾಮು ಕಟ್ಟಡದ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಭೂಮಿಪೂಜೆ ನೆರವೇರಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಕಟ್ಟಡ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ, ಅಂದಾಜು ₹2.87 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ವಿ.ವಿ.ಪ್ಯಾಟ್ ಹಾಗೂ ಇ.ವಿ.ಎಂ.ಗಳ ದಾಸ್ತಾನಿಗಳಿಗೆ ಈ ಕಟ್ಟಡ ಬಳಕೆ ಮಾಡಿಕೊಳ್ಳಲಾಗುತ್ತಿದೆ. ನಿರ್ಮಿತಿ ಕೇಂದ್ರಕ್ಕೆ ಕಟ್ಟಡ ನಿರ್ಮಾಣದ ಜವಾಬ್ದಾರಿ ವಹಿಸಲಾಗಿದೆ ಎಂದರು.
‘ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ತಿಮ್ಮೇಶಕುಮಾರ ಮಾಹಿತಿ ನೀಡಿ, 900 ಚದರ ಮೀಟರ್ ವಿಸ್ತೀರ್ಣದ ಎರಡು ಮಹಡಿಯ ಕಟ್ಟಡ ಇದಾಗಲಿದೆ. ಚುನಾವಣಾ ಕಾರ್ಯಾಲಯ ಸ್ಟ್ರಾಂಗ್ ರೂಮ್ ಕಟ್ಟಡದಲ್ಲಿ ಕೊಠಡಿಗಳು, ಸಿ.ಸಿ.ಟಿ.ವಿ, ಭದ್ರತಾ ಸಿಬ್ಬಂದಿ ಕೊಠಡಿ, ಸುತ್ತಲೂ ಕಾಂಪೌಂಡ್ ಸೇರಿದಂತೆ ಕಚೇರಿಯಲ್ಲಿ ಕಾರ್ಯಚಟುವಟಿಕೆಗೆ ಅನುಕೂಲವಾಗುವಂತೆ ವ್ಯವಸ್ಥಿತವಾದ ಕಟ್ಟಡ ನಿರ್ಮಿಸಲಾಗುವುದು. ಮಾರ್ಚ್ ಅಂತ್ಯದೊಳಗಾಗಿ ಕಟ್ಟಡವನ್ನು ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ಧಪಡಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ, ಉಪ ವಿಭಾಗಾಧಿಕಾರಿ ಡಾ.ದೀಲಿಷ್ ಶಶಿ, ಚುನಾವಣಾ ತಹಶೀಲ್ದಾರ್ ಪ್ರಶಾಂತ ನಾಲವಾರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಜೋಷಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ ಇದ್ದರು.