ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಸರಲ್ಲಿ ಕಲ್ಲು ಹುಡುಕುವುದನ್ನು ಕಾಂಗ್ರೆಸ್ ಬಿಡಬೇಕು: ಸಿಎಂ ಬಸವರಾಜ ಬೊಮ್ಮಾಯಿ

‘ಬಿಜೆಪಿ ಪರ ಸಾಮಾಜಿಕ ಸಮೀಕರಣ’ಹೇಳಿಕೆ
Last Updated 25 ಅಕ್ಟೋಬರ್ 2021, 12:01 IST
ಅಕ್ಷರ ಗಾತ್ರ

ಹಾವೇರಿ: ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಲ್ಲ ವರ್ಗಗಳ ಜನರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಬಿಜೆಪಿ ಪರ ‘ಸಾಮಾಜಿಕ ಸಮೀಕರಣ’ ಕಂಡುಬರುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ಸಿಂಧಗಿ ಮತ್ತು ಹಾನಗಲ್‌ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ದೊಡ್ಡ ಅಂತರದಿಂದ ಜಯ ಸಾಧಿಸುತ್ತದೆ. ಜನರು ಬಿಜೆಪಿ ಪರ ಒಲವು ತೋರುತ್ತಿದ್ದಾರೆ.ಕಾಂಗ್ರೆಸ್ ಬೇರೆಯವರ ‘ದೌರ್ಬಲ್ಯಗಳ’ ಮೇಲೆ ಮತಗಳನ್ನು ಪಡೆಯಲು ಯತ್ನಿಸುತ್ತದೆ. ನಾವು ನಮ್ಮ ‘ಶಕ್ತಿ’ಯ ಮೇಲೆ ಮತಗಳನ್ನು ಪಡೆಯುತ್ತೇವೆ ಎಂದರು.

ನನ್ನನ್ನು ಟೀಕಿಸಿದರೆ ಮತ ಸಿಗಲ್ಲ:

ನನ್ನನ್ನು ಟೀಕಿಸಿದರೆ ನಾಲ್ಕು ಮತಗಳು ಜಾಸ್ತಿ ಬರುತ್ತವೆ ಎಂದು ಸಿದ್ದರಾಮಯ್ಯ ನನ್ನ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಮತಗಳು ಸಿಗುವುದಿಲ್ಲ. ಜನರ ಭಾವನೆಯ ವಿರುದ್ಧವಾಗಿ ಮಾತನಾಡಿದರೆ, ಮತಗಳನ್ನು ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಬಿ.ಎಸ್‌.ಯಡಿಯೂರಪ್ಪ ಅವರದ್ದು ಕರ್ಮಕಾಂಡವಿಲ್ಲ ಎಂದ ಮೇಲೆ ಅದರಲ್ಲಿ ನನ್ನ ಪಾಲಿದೆ ಎಂಬ ಪ್ರಶ್ನೆಯೇ ಬರುವುದಿಲ್ಲ. ಕಾಂಗ್ರೆಸ್‌ ಒಂದು ಸುಳ್ಳಿನ ಸಂತೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಧಾನಸೌಧಕ್ಕೆ ಬೀಗ ಹಾಕಿಲ್ಲ:

ಡಿ.ಕೆ.ಶಿವಕುಮಾರ್‌ ಆರೋಪಕ್ಕೆ ಪ್ರತಿಕ್ರಿಯಿಸಿ, ವಿಧಾನಸೌಧಕ್ಕೆ ನಾವು ಬೀಗ ಹಾಕಿಲ್ಲ. ಕೆಲಸ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ನಮ್ಮ ಸಚಿವ ಸಂಪುಟದಲ್ಲಿ ಒಗ್ಗಟ್ಟಿದೆ. ಹೀಗಾಗಿ ಎರಡು–ಮೂರು ದಿನ ಸಚಿವರು ಹಾನಗಲ್‌ ಕ್ಷೇತ್ರಕ್ಕೆ ಬಂದು ಹೋಗುತ್ತಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಮಾಡಿದರೆ ಕಾಂಗ್ರೆಸ್‌ನವರಿಗೆ ಏಕೆ ಆತಂಕ. ಸೋಲಿನ ಭಯದಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಣಾಳಿಕೆ ಜನರ ಪುರುಷಾರ್ಥಕ್ಕೆ:

ಹಾನಗಲ್‌ ಉಪಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿರುವುದು ಡಿ.ಕೆ.ಶಿವಕುಮಾರ್‌ ಅವರ ಪುರುಷಾರ್ಥಕ್ಕಲ್ಲ, ಜನರ ಪುರುಷಾರ್ಥಕ್ಕೆ. ಅಭಿವೃದ್ಧಿ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಒಂದು ಕೆಲಸ ಮಾಡಿ ಮತ್ತೊಂದು ನಿಲ್ಲಿಸುವುದು ಕಾಂಗ್ರೆಸ್‌ ಸಂಸ್ಕೃತಿ. ಹಾನಗಲ್‌ ಪಟ್ಟಣವನ್ನು ಯೋಜನಾಬದ್ಧವಾಗಿ ಬೆಳೆಸುವ ಗುರಿ ಇದೆ ಎಂದರು.

ಕೋವಿಡ್ ಸಾವನ್ನು ಬಿಜೆಪಿ ಸಂಭ್ರಮಿಸುತ್ತಿದೆ ಎಂಬ ಡಿ.ಕೆ.ಶಿವಕುಮಾರ್‌ ಆರೋಪಕ್ಕೆ, ಕಾಂಗ್ರೆಸ್‌ನವರು ನೋಡುವ ದೃಷ್ಟಿಯನ್ನು ಬದಲಿಸಿಕೊಳ್ಳಬೇಕು. ಕೋವಿಡ್‌ ನಿಯಂತ್ರಿಸಲು ಇರುವ ಏಕೈಕ ಸುರಕ್ಷಾ ಚಕ್ರವೇ ಲಸಿಕೆ. ದೇಶದ 100 ಕೋಟಿ ಜನರಿಗೆ ಲಸಿಕೆ ಹಾಕಿದ ಪರಿಣಾಮ, ಜನರು ಸಾವಿನ ದವಡೆಯಿಂದ ಹೊರಬಂದಿದ್ದಾರೆ. ಜನರಲ್ಲಿ ವಿಶ್ವಾಸ ಮೂಡಿಸುವುದಕ್ಕಾಗಿ ಲಸಿಕಾಕರಣದ ಸಂಭ್ರಮಾಚರಣೆ ನಡೆಯುತ್ತಿದೆ. ‘ಮೊಸರಲ್ಲಿ ಕಲ್ಲು ಹುಡುಕುವ ಕೆಲಸ’ವನ್ನು ಕಾಂಗ್ರೆಸ್ ಬಿಡಬೇಕು ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT