ಹಾವೇರಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ ‘ಪದಗ್ರಹಣ’ ಕಾರ್ಯಕ್ರಮದ ನೇರಪ್ರಸಾರವನ್ನು ಜಿಲ್ಲೆಯಲ್ಲಿ 10 ಸಾವಿರ ಮಂದಿ ವೀಕ್ಷಿಸಿದರು.
ನಗರದ ಸಜ್ಜನರ ಫಂಕ್ಷನ್ ಹಾಲ್, ಮೈಲಾರ ಮಹದೇವಪ್ಪ ಸರ್ಕಲ್, ಸುಭಾಷ್ ಸರ್ಕಲ್, ಇಜಾರಿಲಕಮಾಪುರದ ದುಂಡಿ ಬಸವೇಶ್ವರ ಸಭಾಭವನ ಮತ್ತು ನಾಗೇಂದ್ರಮಟ್ಟಿಯ ಸಮುದಾಯ ಭವನ ಸೇರಿದಂತೆ ಐದು ಕಡೆ ನೇರಪ್ರಸಾರವನ್ನು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2.30ರವರೆಗೆ ಮುಖಂಡರು ಮತ್ತು ಕಾರ್ಯಕರ್ತರು ವೀಕ್ಷಿಸಿದರು.
ಗ್ರಾಮ ಪಂಚಾಯ್ತಿ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿ ಸೇರಿದಂತೆಜಿಲ್ಲೆಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮ ವೀಕ್ಷಿಸಿ, ಸಂಭ್ರಮಿಸಿದರು. ಕೆಪಿಸಿಸಿಯಿಂದ ಕೊಟ್ಟಿದ್ದ ಮೊಬೈಲ್ ನಂಬರ್ಗೆ ಮಿಸ್ಡ್ ಕಾಲ್ ಕೊಟ್ಟರು. ಕಾರ್ಯಕರ್ತರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಹಿರೇಮಠ ಹೇಳಿದರು.
ನಗರದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ, ಮುಖಂಡರಾದ ಡಿ.ಆರ್.ಪಾಟೀಲ, ಕೆಪಿಸಿಸಿ ವೀಕ್ಷಕ ಜಯಸಿಂಹ, ಕೊಟ್ರೇಶಪ್ಪ ಬಸೇಗಣ್ಣಿ, ಸಂಜೀವ ನೀರಲಗಿ, ಎಸ್.ಎಫ್.ಎನ್.ಗಾಜಿಗೌಡ್ರ ಮುಂತಾದವರು ನೇರಪ್ರಸಾರ ವೀಕ್ಷಿಸಿದರು.