ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆವಳುತ್ತಿರುವ ಕಾಮಗಾರಿ: ತಪ್ಪದ ಕಿರಿಕಿರಿ

ನನೆಗುದಿಗೆ ಬಿದ್ದ ಅಭಿವೃದ್ಧಿ ಯೋಜನೆಗಳು: ಗಾಜಿನ ಮನೆ, ವಿಜ್ಞಾನ ಕೇಂದ್ರ ಕಾಮಗಾರಿಗೆ ಗ್ರಹಣ
Last Updated 14 ನವೆಂಬರ್ 2021, 14:11 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಹಲವಾರು ಯೋಜನೆಗಳು ಆಮೆಗತಿಯಲ್ಲಿ ಸಾಗುತ್ತಿದ್ದರೆ, ಮತ್ತೆ ಕೆಲವು ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ಒಂದು ಕಡೆ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದ್ದರೆ, ಮತ್ತೊಂದು ಕಡೆ ಅಪೂರ್ಣ ಕಾಮಗಾರಿಗಳಿಂದ ಜನರು ಕಿರಿಕಿರಿ ಅನುಭವಿಸುವಂತಾಗಿದೆ.

ನಗರದ ಹೊರವಲಯದಲ್ಲಿರುವ ಹೆಗ್ಗೇರಿ ಕೆರೆಯಲ್ಲಿ ‘ಗಾಜಿನ ಮನೆ’ ನಿರ್ಮಾಣದ ಕಾಮಗಾರಿ ನಾಲ್ಕು ವರ್ಷಗಳಿಂದ ಆಮೆಗತಿಯಲ್ಲಿ ತೆವಳುತ್ತಿದೆ.ದೇವಗಿರಿ ಸಮೀಪವಿರುವ ಜಿಲ್ಲಾಡಳಿತ ಭವನದ ಎದುರು ನಿರ್ಮಾಣಗೊಳ್ಳಬೇಕಿರುವ ‘ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ’ದ ಕಾಮಗಾರಿ ನನೆಗುದಿಗೆ ಬಿದ್ದಿದ್ದು, 15 ವರ್ಷ ಕಳೆದರೂ ಈ ಯೋಜನೆ ಸಾಕಾರಗೊಂಡಿಲ್ಲ.

ಹಾವೇರಿ ನಗರಕ್ಕೆ 24x7 ಕುಡಿಯುವ ನೀರಿನ ಯೋಜನೆ, ರಸ್ತೆ, ಮೇಲ್ಸೇತುವೆ, ಶಾಲಾ ಕಟ್ಟಡ, ಶೌಚಾಲಯ, ಸಮುದಾಯ ಭವನ...ಹೀಗೆ ಜಿಲ್ಲೆಯ ವಿವಿಧ ಕಡೆ ಕೈಗೊಂಡಿರುವ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ.ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಮುಗಿಯದ ಕಾರಣ, ವರ್ಷದಿಂದ ವರ್ಷಕ್ಕೆ ಯೋಜನೆಗಳ ವೆಚ್ಚವೂ ಹೆಚ್ಚುತ್ತಿದೆ.

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಮತ್ತು ಬೇಜವಾಬ್ದಾರಿಯಿಂದ ಯೋಜನೆಗಳು ಹಳ್ಳ ಹಿಡಿದಿವೆ. ಇಲಾಖೆಗಳ ನಡುವೆ ಸಮನ್ವಯದ ಕೊರತೆ ಮತ್ತು ಭ್ರಷ್ಟಾಚಾರ ಕೂಡ ಯೋಜನೆಗಳ ವೈಫಲ್ಯಕ್ಕೆ ಕಾರಣ ಎನ್ನಲಾಗುತ್ತಿದೆ.

ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ‘ಕಪ್ಪು ಪಟ್ಟಿಗೆ’ ಸೇರಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಆಮೆಗತಿಯಲ್ಲಿ ರಸ್ತೆ ವಿಸ್ತರಣೆ

ಹಿರೇಕೆರೂರು: ತಾಲ್ಲೂಕಿನ ಕೋಡ ಗ್ರಾಮದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು, ರಸ್ತೆ ಬದಿ ವ್ಯಾಪಾರಿಗಳು ಹಾಗೂ ಇಲ್ಲಿ ಸಂಚಾರ ಮಾಡುವವರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.

₹3.50 ಕೋಟಿ ಒಟ್ಟು ಮೊತ್ತದ ಕಾಮಗಾರಿಯಲ್ಲಿ ₹2.80 ಕೋಟಿಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ ₹70 ಲಕ್ಷದಲ್ಲಿ ಬೀದಿ ದೀಪ ಅಳವಡಿಸಬೇಕಿದೆ.

ಕಾಮಗಾರಿ ಅಪೂರ್ಣ: ಜನರು ಹೈರಾಣ

ಶಿಗ್ಗಾವಿ: ಪಟ್ಟಣದ ಗಂಗೇಭಾವಿ ಕ್ರಾಸ್ ಬಳಿಯಲ್ಲಿನ ಜೋಡು ರಸ್ತೆ ಕಾಮಗಾರಿ ವಿಳಂಬವಾಗಿದ್ದು, ಸಾರ್ವಜನಿಕರು, ವಾಹನ ಚಾಲಕರು ನಿತ್ಯ ಸಂಚಾರಕ್ಕಾಗಿ ಪರದಾಡುವಂತಾಗಿದೆ.

ಕಾಮಗಾರಿ ಅರ್ಧಕ್ಕೆ ನಿಂತ ಕಾರಣ ಮಳೆ ನೀರು ರಾಚನಕಟ್ಟಿ ಕೆರೆಗೆ ಹೋಗುವ ಬದಲಾಗಿ ಪಕ್ಕದ ಜಮೀನಿಗೆ ನುಗ್ಗಿ ಸಾಕಷ್ಟು ಬೆಳೆ ಹಾನಿಯಾಗಿದೆ. ಕಾಮಗಾರಿಗೆ ಬಳಕೆ ಮಾಡಿರುವ ಕಬ್ಬಣದ ಸರಳುಗಳು ಅಪಘಾತಕ್ಕೆ ಆಹ್ವಾನ ನೀಡುವಂತಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಶಿಗ್ಗಾವಿ ವಾಹನ ಚಾಲಕ ಪ್ರವೀಣ ಗೌಡಪ್ಪನವರ ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಬಂಕಾಪುರ ಪಟ್ಟಣದ ಕನಕದಾಸರ ದ್ವಾರ ಬಾಗಿಲ ಬಳಿಯಲ್ಲಿ ರಸ್ತೆ ಮತ್ತು ಹಳ್ಳ ಮೇಲಿನ ಸೇತುವೆ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ತಕ್ಷಣ ರಸ್ತೆ ಕಾಮಗಾರಿ ಹಮ್ಮಿಕೊಳ್ಳಬೇಕೆಂದು ಬಂಕಾಪುರ ಪಟ್ಟಣದ ರೈತ ಸುರೇಶಣ್ಣ ಹಳವಳ್ಳಿ ಆಗ್ರಹಿಸಿದ್ದಾರೆ.

ಪೈಪ್‌ಲೈನ್‌ನಿಂದ ರಸ್ತೆ ತುಂಬ ಗುಂಡಿಗಳು

ರಾಣೆಬೆನ್ನೂರು: 24x7 ಕುಡಿಯುವ ನೀರಿನಯೋಜನೆ ಮತ್ತು ಒಳಚರಂಡಿ ಪೈಪ್‌ಲೈನ್‌ ಅಳವಡಿಸಲು ರಸ್ತೆಗಳನ್ನು ಅಗೆದಿದ್ದು, ಎಲ್ಲ ಕಡೆಗಳಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಈಚೆಗೆ ಮುಖ್ಯಮಂತ್ರಿ ಆಗಮನದಿಂದಾಗಿ ತಗ್ಗು ಗುಂಡಿಗಳಿಗೆ ಕಲ್ಲು ಪುಡಿ ಹಾಕಿ ಮುಚ್ಚಿದ್ದರು. ಅದು ಮಳೆ ಹೊಡೆತಕ್ಕೆ ಕಿತ್ತು ಹೋಗಿದೆ.

ಅನೇಕ ವಾರ್ಡ್‌ಗಳಲ್ಲಿ 24x7 ಕುಡಿವ ನೀರಿನ ಯೋಜನೆ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿವೆ.

ತಾಲ್ಲೂಕಿನ ಕಾಕೋಳ ಗ್ರಾಮದಿಂದ ಕರೂರ- ಚಳಗೇರಿವರೆಗೂ ಷಟ್ಪಥ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್‌ ರಸ್ತೆ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ. ರೈತರಿಗೆ ಅಡ್ಡಾಡಲು ತೀವ್ರ ತೊಂದರೆಯಾಗಿದೆ. ಚಳಗೇರಿ ಬಳಿ ಮೇಲ್ಸೇತುವೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ಹೆಚ್ಚಿನ ಮಳೆ ನೀರು ಸಂಗ್ರಹವಾಗಿ ಸಂಚಾರಕ್ಕೆ ಅಡ್ಡಿಯಾಗಿದೆ.

ನನೆಗುದಿಗೆ ಬಿದ್ದ ‘ವಾಣಿಜ್ಯ ಸಂಕೀರ್ಣ’

ರಟ್ಟೀಹಳ್ಳಿ: ಪಟ್ಟಣ ಪಂಚಾಯ್ತಿಗೆ ಸೇರಿದ ಒಂಬತ್ತು ವಾಣಿಜ್ಯ ಮಳಿಗೆಗಳ ಸಂಕೀರ್ಣ ಮೂರು ವರ್ಷಗಳಿಂದ ಅರ್ಧಕ್ಕೆ ನಿಂತು ಮುಂಗಡವಾಗಿ ಹಣ ನೀಡಿದ ವ್ಯಾಪಾರಸ್ಥರು ಪರದಾಡುವಂತಾಗಿದೆ.

ವ್ಯಾಪಾರಸ್ಥರಿಂದ ಮುಂಗಡ ಅಂತಾ ₹3.25 ಲಕ್ಷ ಪಡೆದು ವಾಣಿಜ್ಯ ಸಂಕೀರ್ಣ ಕಟ್ಟಿಕೊಡುವ ಭರವಸೆ ನೀಡಿದ್ದರು. ಇದೀಗ ರಟ್ಟೀಹಳ್ಳಿ ಪಟ್ಟಣ ಪಂಚಾಯ್ತಿಯಾಗಿ ಮಾರ್ಪಾಡಾಗಿದ್ದರಿಂದ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿದೆ.ಹಿಂದೆ ಗ್ರಾಮ ಪಂಚಾಯ್ತಿ ಅಧಿಕಾರಾವಧಿಯಲ್ಲಿ 9 ಮಳಿಗೆಗಳಿಂದ ಪ್ರತಿ ತಿಂಗಳು ₹20 ಸಾವಿರ ಗ್ರಾಮ ಪಂಚಾಯ್ತಿಗೆ ಆದಾಯ ಬರುತ್ತಿತ್ತು. ಮೂರು ವರ್ಷ ಗತಿಸಿದರೂ ಕಟ್ಟಡ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ ಎಂದು ವ್ಯಾಪಾರಿಗಳಾದ ಜಾವೀದ್‌ ಗೋಡಿಹಾಳ ಹಾಗೂ ರಿಯಾಜ್‌ ಅಹ್ಮದ್‌ ಬೇಪಾರಿ ತಮ್ಮ ಅಳಲು ತೋಡಿಕೊಂಡರು.

ಕಳಪೆ ಕಾಮಗಾರಿ ಆರೋಪ

ಬ್ಯಾಡಗಿ: ಪಟ್ಟಣದ ಸ್ಟೇಷನ್ ರಸ್ತೆಯನ್ನು ಕೆಸಿಸಿ ಬ್ಯಾಂಕ್‍ವರೆಗೆ ದ್ವಿಮುಖ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಒಳಚರಂಡಿ ಹಾಗೂ 24X7 ಕುಡಿಯುವ ನೀರಿನ ಯೋಜನೆ ಕಾಮಗಾರಿ ಕೈಗೊಳ್ಳಲು ರಸ್ತೆಯನ್ನು ಎರಡೂ ಬದಿಗೂ ಅಗೆಯಲಾಗಿದೆ. ಗುತ್ತಿಗೆದಾರರು ರಸ್ತೆ ದುರಸ್ತಿ ಕಾರ್ಯವನ್ನು ಸಮರ್ಪಕವಾಗಿ ಕೈಕೊಂಡಿಲ್ಲ. ಕಳಪೆ ಗುಣಮಟ್ಟದ ಸಿಮೆಂಟ್ ಬಳಸಿದ ಪರಿಣಾಮ ಮತ್ತೆ ರಸ್ತೆ ಕಿತ್ತು ಹೋಗಿದೆ. ಇದರಿಂದ ವಾಹನ ಸವಾರರು ರಸ್ತೆ ದಾಟಲು ನರಕ ಯಾತನೆ ಅನುಭವಿಸುವಂತಾಗಿದೆ.

‘ಮುಖ್ಯ ರಸ್ತೆಯ ಎರಡು ಬದಿಗೂ ಚರಂಡಿಗಳಿಲ್ಲದೆ ಶೌಚಾಲಯದ ಕೊಳಚೆ ನೀರು ಮುಂದಕ್ಕೆ ಹರಿಯುತ್ತಿಲ್ಲ. ಸೊಳ್ಳೆಗಳು ಹೆಚ್ಚಿದ್ದು ಕೊಳಕು ವಾಸನೆ ಮೂಗಿಗೆ ರಾಚುತ್ತಿದೆ’ ಎಂದು ನಿವಾಸಿ ಸತ್ಯನಾರಾಯಣ ಉಮಾಪತಿ ಸಮಸ್ಯೆ ತೋಡಿಕೊಂಡರು.

ಪ್ರಯಾಣಿಕರಿಗೆ ದೂಳಿನ ಮಜ್ಜನ

ಸವಣೂರ: ತಾಲ್ಲೂಕಿನ ಕೆಲ ಗ್ರಾಮಗಳ ರಸ್ತೆಗಳ ಕಾಮಗಾರಿಗಳು ಅವಧಿ ಮುಗಿದರೂ ಕೂಡ ಪೂರ್ಣಗೊಂಡಿಲ್ಲ. ನಿತ್ಯ ಸಂಚರಿಸುವ ವಾಹನ ಸವಾರರು ಹಾಗೂ ಜನಸಾಮಾನ್ಯರಿಗೆ ದೂಳಿನ ಮಜ್ಜನವಾಗುತ್ತಿದೆ.

ಲೋಕೋಪಯೋಗಿ ಇಲಾಖೆಯ ವತಿಯಿಂದ ಕೈಗೊಂಡಿರುವ ಚಿಲ್ಲೂರಬಡ್ನಿಯಿಂದ ಚವಡಾಳ ಸುಮಾರು 12 ಕಿ.ಮೀ. ರಸ್ತೆಯ ಕಾಮಗಾರಿ ಡಿಸೆಂಬರ್‌ಗೆ ಪೂರ್ಣಗೊಳ್ಳಬೇಕು. ಇದುವರೆಗೂ ಕೇವಲ 4 ಕಿ.ಮೀ ಮಾತ್ರ ಕಾಮಗಾರಿಯಾಗಿದೆ. ತೆವರಮೆಳ್ಳಿಹಳ್ಳಿಯಿಂದ ಹರವಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ಕೂಡ ತೆವಳುತ್ತಿದೆ.

***

ರಸ್ತೆ ಕಾಮಗಾರಿ ದೂಳಿನಿಂದ ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ. ವೈಜ್ಞಾನಿಕ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು
–ಮಂಜಣ್ಣ ಶಿವರಾಡಕರ, ಬ್ಯಾಡಗಿ ನಿವಾಸಿ

ರಸ್ತೆ ವಿಸ್ತರಣೆ ಮಾಡಲು ಮನೆ, ಅಂಗಡಿ ಹಾಗೂ ದೇವಸ್ಥಾನಗಳನ್ನು ತೆರವುಗೊಳಿಸುವ ಸಂಬಂಧ ಕಾಮಗಾರಿ ಸ್ವಲ್ಪ ವಿಳಂಬವಾಯಿತು
– ಎಸ್.ಆರ್.ಬಳ್ಳಾರಿ, ಗುತ್ತಿಗೆದಾರ, ಹಿರೇಕೆರೂರು

ಮಳೆಗಾಲ ಕಡಿಮೆಯಾಗಿದ್ದು, ಡಾಂಬರ್‌ ಪ್ಲಾಂಟ್‌ಗಳು ಪ್ರಾರಂಭವಾಗಿವೆ. ನಗರದ ಎಲ್ಲ ರಸ್ತೆಗಳ ಡಾಂಬರೀಕರಣ ಶೀಘ್ರ ಮಾಡಲಾಗುವುದು
– ಎಂ.ಎಸ್‌. ಗುಡಿಸಲಮನಿ, ನಗರಸಭೆ ಎಂಜಿನಿಯರ್‌

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಮುಕ್ತೇಶ್ವರ ಕೂರಗುಂದಮಠ, ಎಂ.ವಿ.ಗಾಡದ, ಕೆ.ಎಚ್‌.ನಾಯಕ, ಪ್ರಮೀಳಾ ಹುನಗುಂದ, ಗಣೇಶಗೌಡ ಎಂ.ಪಾಟೀಲ, ಪ್ರದೀಪ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT