ಹಾವೇರಿ: ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಈದ್ ಮಿಲಾದ್ ಅನ್ನು ಮುಸ್ಲಿಮರು ಸರಳವಾಗಿ ಆಚರಿಸಿದರು.
ಪ್ರತಿ ವರ್ಷ ಸಾಮೂಹಿಕ ಮೆರವಣಿಗೆ, ಡಿ.ಜೆ, ಮೊಹಲ್ಲಾಗಳಲ್ಲಿ ಹಗಲು ಮತ್ತು ರಾತ್ರಿಯ ಪ್ರವಚನ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿದ್ದವು. ಈ ಬಾರಿ ಕೊರೊನಾ ವೈರಸ್ ಸೋಂಕು ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಮುಸ್ಲಿಮರು ಮಸೀದಿ ಮತ್ತು ದರ್ಗಾಗಳಿಗೆ ಭೇಟಿ ನೀಡಿ ಭಕ್ತಿಪೂರ್ವಕವಾಗಿ ಹಬ್ಬ ಆಚರಿಸಿದರು.
‘ಈ ಬಾರಿ ಶುಕ್ರವಾರವೇ ಹಬ್ಬ ಬಂದಿರುವುದು ವಿಶೇಷ. ಹಾಗಾಗಿ ಮಸೀದಿಗಳಲ್ಲಿ ಅಂತರ ಕಾಪಾಡಿಕೊಂಡು ಪ್ರಾರ್ಥನೆ ಸಲ್ಲಿಸಿ, ಚಾದರ ಹೊದಿಸಿದೆವು. ಬಡವರಿಗೆ ದಾನ ಧರ್ಮ ಮಾಡಿದೆವು. ಮೊಹಲ್ಲಾಗಳ ಗಲ್ಲಿಗಳಲ್ಲಿ ಪಾನಕ, ಹಣ್ಣು ಮತ್ತು ಸಿಹಿ ತಿನಿಸುಗಳ ವಿತರಣೆ ಮಾಡಲಾಯಿತು’ ಎಂದು ಮುಸ್ಲಿಂ ಮುಖಂಡ ಬಾಬುಸಾಬ್ ಮೋಮಿನ್ಗಾರ್ ತಿಳಿಸಿದರು.
ಮನೆಗಳಲ್ಲಿ ಮಹಮ್ಮದ್ ಪೈಗಂಬರ್ ಅವರನ್ನು ಮುಸ್ಲಿಮರು ಆರಾಧಿಸಿದರು. ಹೋಳಿಗೆ, ಕರಿಗಡುಬು, ಶ್ಯಾವಿಗೆ ಕೀರು, ಬಿರಿಯಾನಿ, ಚಿಕನ್ ಮತ್ತು ಮಟನ್ ಖಾದ್ಯಗಳನ್ನು ಮಾಡಿ, ನೆರೆಹೊರೆಯವರೊಂದಿಗೆ ಹಂಚಿಕೊಂಡರು. ಮಕ್ಕಳು ಹೊಸಬಟ್ಟೆ ಧರಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.