ಹಾವೇರಿ: ‘ಈ ವರ್ಷ ಹವಾಮಾನ ವೈಪರೀತ್ಯದಿಂದ ವಾತಾವರಣದಲ್ಲಿ ವಿಪರೀತ ಬದಲಾವಣೆ ಅಗಿದ್ದು, ಪ್ರಸಕ್ತ ವರ್ಷ ಬೇಸಿಗೆಯ ಬೀಸಿಲು 40 ಡಿಗ್ರಿ ದಾಟಿತ್ತು. ಮುಂದಿನ ವರ್ಷ ಇದೆ ರೀತಿ ಬಿಸಿಲು ಮುಂದುವರೆದರೆ ಮನುಷ್ಯ ಬದುಕುವುದು ಕಷ್ಟವಾಗುತ್ತದೆ’ ಎಂದು ಡಾ.ಶ್ರವಣ ಪಂಡಿತ ಹೇಳಿದರು.
ನಗರದ ಗೆಳೆಯರ ಬಳಗದ ಜ್ಞಾನಗಂಗಾ ಶಿಕ್ಷಣ ಸಮಿತಿಯ ಶಹಾ ಮಾಣಿಕಜಿ ವೇಲಜಿ ಲೋಡಾಯಾ ಶಿಶುವಿಹಾರ, ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಮಕ್ಕಳು ಪ್ರತಿಯೊಬ್ಬರು ಕನಿಷ್ಠ ಒಂದು ಗಿಡಗಳನ್ನಾದರು ನೇಡಬೇಕು. ಇದರಿಂದ ನಿಮ್ಮ ಮುಂದಿನ ವರ್ಷಗಳಲ್ಲಿ ಹವಾಮಾನ ಸಹಜ ಸ್ಥಿತಿಯತ್ತ ಮರಳಲು ಸಾಧ್ಯವಾಗುತ್ತದೆ. ಮರಗಳನ್ನು ಕಡಿದು ನಾಡನ್ನು ಬೆಳೆಸುತ್ತಿರುವ ಮನುಷ್ಯನಿಂದ ಮಳೆ,ಬೇಸಿಗೆ ಚಳಿಗಾಲದಲ್ಲಿ ಬದಲಾವಣೆಗಳಾಗಿ ಜೀವ ಸಂಕುಲ ಸಂಕಷ್ಟಕ್ಕಿಡಾಗುತ್ತಿದ್ದಾನೆ’ ಎಂದರು.
ರೇಖಾ ಓಲೇಕಾರ ಮಾತನಾಡಿ, ‘ಭೂಮಿಯ ಮೇಲೆ ಜೀವಿಸುವ ಪ್ರತಿಯೊಬ್ಬರು ಪರಿಸರವನ್ನು ಸಂರಕ್ಷಿಸಬೇಕು.ಗಿಡಮರಗಳನ್ನು ಹೆಚ್ಚು ಬೆಳೆಸುವುದರಿಂದ ಬಿಸಿಲಿನ ಬೇಗ ಕಡಿಮೆಯಾಗಿ ಜನರಿಗೆ ಉತ್ತಮ ಆಮ್ಲಜನಕ ದೊರೆಯಲಿದೆ. ಪರಿಸರ ಸೌಂದರ್ಯವೂ ಹೆಚ್ಚಾಗಲಿದೆ. ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಮ್ಮ ಮನೆಯ ಸುತ್ತಮುತ್ತಲೂ ಗಿಡಗಳನ್ನು ಬೆಳೆಸುವುದಲ್ಲದೆ ಮನೆಯಲ್ಲಿ ಬಳಸಿದ ನೀರನ್ನು ಮರು ಬಳಕೆ ಮಾಡಬೇಕು’ ಎಂದರು.
ಶಾಲೆಯ ಮಕ್ಕಳು ಪರಿಸರ ದಿನಾಚರಣೆಯ ಬಗ್ಗೆ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಶಾಲೆಯ ಮಕ್ಕಳು ಪರಿಸರ ಜಾಗೃತಿ ಗೀತೆಗೆ ನೃತ್ಯ ಮಾಡಿದರು.