ಹಾವೇರಿ: ನಗರದ ಪಶುವೈದ್ಯಕೀಯ ಪಾಲಿಕ್ಲಿನಿಕ್ ಸಭಾ ಭವನದಲ್ಲಿ ನಡೆದ ಪಶುವೈದ್ಯಕೀಯ ಪರೀಕ್ಷಕರ ಸಂಘದ ಜಿಲ್ಲಾ ಘಟಕದ ಸಾಮಾನ್ಯ ಸಭೆಯಲ್ಲಿ ನಿವೃತ್ತ ನೌಕರರ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ನಿವೃತ್ತಿ ಹೊಂದಿದ ಹಿರಿಯ ಪಶುವೈದ್ಯಕೀಯ ಪರೀಕ್ಷಕರಾದ ಚೇತನ ಶಿಬ್ರಕೇರಿ, ಐ.ಎ.ಬಡಿಗೇರ, ಬಸಪ್ಪ ಮುದ್ದಿ, ಪಿ.ಕೆ.ಕರಾಟೆ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಶೇ 96 ಅಂಕ ಗಳಿಸಿದ ಅನಿಕೇತನ ಸೂರಿ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಪಶುವೈದ್ಯಕೀಯ ಪರೀಕ್ಷಕ ಉಮಾಕಾಂತ ದಶಮಾನೆ ಮಾತನಾಡಿ, ‘ಸರ್ಕಾರ ಮುಂಬಡ್ತಿ ಆದೇಶವನ್ನು ರದ್ದು ಮಾಡಿರುವುದರಿಂದ ನೂರಾರು ನೌಕರರು ಹಿಂಬಡ್ತಿ ಹೊಂದಿ ತೊಂದರೆ ಅನುಭವಿಸುವಂತಾಗಿದೆ. ಸುಮಾರು 800 ಕಿ.ಮೀ. ದೂರದಿಂದ ಬಂದು ಇಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ. ಮುಂಬಡ್ತಿ ಪ್ರಕರಣವನ್ನು ಸುಖಾಂತ್ಯಗೊಳಿಸಲು ಸಂಘದಿಂದ ತುರ್ತು ಪ್ರಯತ್ನ ಆಗಬೇಕು’ ಎಂದು ಹೇಳಿದರು.
ಸಂಘದ ಅಧ್ಯಕ್ಷ ಜೆ.ಎಸ್.ಅಗಸರ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಂಘದ ಪ್ರತಿನಿಧಿ ಎನ್.ಎಚ್.ಬಣಕಾರ, ಎಸ್.ಎಫ್. ಕರಿಯಪ್ಪನವರ, ಸಿ.ಡಿ.ಯತ್ನಳ್ಳಿ, ಬಿ.ಐ.ಆಡೂರ ಇದ್ದರು.