ಬ್ಯಾಡಗಿ: ತಾಲ್ಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ಶನಿವಾರ ಜರುಗಿದ 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಪ್ಪ ಕುಳೇನೂರ ಚಾಲನೆ ನೀಡಿದರು.
ಸಮ್ಮೇಳನದ ಅಧ್ಯಕ್ಷ ಪ್ರಕಾಶ ಮನ್ನಂಗಿ ದಂಪತಿಯ ನೇತೃತ್ವದಲ್ಲಿ ತಾಯಿ ಭುವನೇಶ್ವರಿಯ ಮೆರವಣಿಗೆ ನವೋದಯ ವಿದ್ಯಾಸಂಸ್ಥೆಯ ಆವರಣದಿಂದ ಆರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು.
ದಾರಿಯುದ್ದಕ್ಕೂ ಸಾಂಸ್ಕೃತಿಕ ಹಿರಿಮೆಯನ್ನು ಸಾರುವ ಜಾನಪದ ಕಲಾ ತಂಡಗಳು ಕಲೆ ಪ್ರದರ್ಶಿಸಿದವು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಕನ್ನಡ ಪರ ಸಂಘಟನೆಗಳು ಸಾಥ್ ನೀಡಿದವು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಸ್ವಾತಂತ್ರ್ಯ ಹೋರಾಟಗಾರ ಮಹದೇವ ಬಣಕಾರ ವಂಶಸ್ಥರಾದ ಡಾ.ಎಚ್.ಎಸ್. ಮಹದೇವ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಎಲ್ಲರಲ್ಲಿಯೂ ಕನ್ನಡದ ಅಭಿಮಾನ ಹೆಚ್ಚಬೇಕಿದೆ ಎಂದು ಹೇಳಿದರು.
ಸಾನ್ನಿಧ್ಯವನ್ನು ಗುಡ್ಡದ ಆನವೇರಿಯ ಶಿವಯೋಗಿ ಸ್ವಾಮೀಜಿ ವಹಿಸಿದ್ದರು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಕಾಂಗ್ರೆಸ್ ಮುಖಂಡ ಎಸ್.ಆರ್. ಪಾಟೀಲ ಇದ್ದರು.