ಹಾವೇರಿ: ಅತಿವೃಷ್ಟಿ ಮತ್ತು ಅಕ್ಟೋಬರ್ನಲ್ಲಿ ಸುರಿದ ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ ಶೇಂಗಾ ಇಳುವರಿ ಕುಸಿತಗೊಂಡಿದೆ. ಅಲ್ಪಸ್ವಲ್ಪ ದೊರೆತ ಶೇಂಗಾಕ್ಕೂ ಮಣ್ಣು ಮೆತ್ತಿಕೊಂಡ ಕಾರಣ, ‘ಕೈಗೆ ಸಿಕ್ಕ ತುತ್ತು ಬಾಯಿಗೆ ಸಿಗಲಿಲ್ಲ’ ಎಂಬಂತಾಗಿದೆ ರೈತರ ಪರಿಸ್ಥಿತಿ.
ಹದವಾದ ಮಳೆಯಾಗಿದ್ದರೆ, ಶೇಂಗಾ ಗಿಡ ಕಿತ್ತಾಗ ಮಣ್ಣು ಭೂಮಿಯಲ್ಲೇ ಉಳಿದುಕೊಂಡು, ಬೆಳೆ ಕೈ ಸೇರುತ್ತಿತ್ತು. ಈ ಬಾರಿಮಳೆ ಜಾಸ್ತಿಯಾದ ಕಾರಣ ಶೇಂಗಾ ಬೆಳೆಗೆ ಮಣ್ಣು ಹಿಡಿಯಿತು. ಈ ಮಣ್ಣು ಬೇರ್ಪಡಿಸುವ ಪ್ರಕ್ರಿಯೆಯೇ ರೈತರನ್ನು ಹೈರಣಾಗಿಸಿದೆ.
ಪ್ರತಿ ವರ್ಷ ಶೇಂಗಾವನ್ನು ಜರಡಿಯಲ್ಲಿ ಹಾಕಿ, ಗಾಳಿಗೆ ತೂರಿ ನೇರವಾಗಿ ಚೀಲಕ್ಕೆ ತುಂಬುತ್ತಿದ್ದರು. ಈ ಬಾರಿ ಶೇಂಗಾಕ್ಕೆ ಮೆತ್ತಿದ ಮಣ್ಣು ಬಿಸಿಲಿಗೆ ಗಟ್ಟಿಯಾಗಿ, ಜರಡಿಗೆ ಹಾಕಿ ತೂರಿದರೂ ಬಿಡುತ್ತಿಲ್ಲ. ಹಾಗಾಗಿ ಹೊಂಡ, ಕೆರೆ, ನದಿ, ಕೊಳವೆಬಾವಿ ಇದ್ದ ಕಡೆ ಟ್ರಾಕ್ಟರ್, ಚಕ್ಕಡಿಗಳಲ್ಲಿ ಶೇಂಗಾ ಸಾಗಿಸಿ, ನೀರಿನಲ್ಲಿ ತೊಳೆದು ಒಣಗಿಸಿದ ನಂತರ ಚೀಲಕ್ಕೆ ತುಂಬಬೇಕಿದೆ. ಈ ಹೆಚ್ಚುವರಿ ಪ್ರಕ್ರಿಯೆಯಿಂದ ಕೂಲಿ ಕಾರ್ಮಿಕರ ದಿನಗೂಲಿ ಮತ್ತು ಟ್ರಾಕ್ಟರ್ ಬಾಡಿಗೆ ವೆಚ್ಚವನ್ನು ರೈತರು ಭರಿಸಬೇಕಿದೆ.
‘ಹಿಂದಿನ ವರ್ಷ ಗಿಡ ಕಿತ್ತು, ಶೇಂಗಾ ಬಿಡಿಸಿಕೊಡಲು ಎಕರೆಗೆ ₹ 5 ಸಾವಿರ ಗುತ್ತಿಗೆ ಕೊಡಲಾಗುತ್ತಿತ್ತು. ಈ ಬಾರಿ ₹ 8ರಿಂದ ₹ 9 ಸಾವಿರ ಭರಿಸಬೇಕಾಯಿತು. ಅಷ್ಟೇ ಅಲ್ಲ, ಗಿಡ ಕಿತ್ತುಕೊಟ್ಟವರು ಮಣ್ಣು ಮೆತ್ತಿದ್ದ ಕಾರಣ ಶೇಂಗಾ ಬಿಡಿಸಿಕೊಡಲು ಹಿಂದೇಟು ಹಾಕಿದರು. ಇದರಿಂದ ಶೇಂಗಾ ಮತ್ತು ಗಿಡವನ್ನು ಬೇರ್ಪಡಿಸಲು ಯಂತ್ರಕ್ಕೆ ₹ 3 ಸಾವಿರ ಕೊಟ್ಟೆವು. ಶೇಂಗಾ ಬೇರ್ಪಟ್ಟರೂ ಮಣ್ಣು ಮಾತ್ರ ಬಿಡಲಿಲ್ಲ. ಹಾಗಾಗಿ, ಟ್ರಾಕ್ಟರ್ಗೆ ಒಂದು ಸಾವಿರ ಬಾಡಿಗೆ ಕೊಟ್ಟು, ಹೆಗ್ಗೇರಿ ಕೆರೆಗೆ ಶೇಂಗಾವನ್ನು ತೊಳೆಯಲು ತಂದಿದ್ದೇನೆ. ಜತೆಗೆ 4 ಕೂಲಿ ಕಾರ್ಮಿಕರನ್ನೂ ಕರೆ ತಂದಿದ್ದೇನೆ. ಅವರಿಗೆ ದಿನಗೂಲಿ ತಲಾ ₹ 300. ಹೀಗಾಗಿ ಸಿಗುವ ಅಲ್ಪಸ್ವಲ್ಪ ಲಾಭವೂ ಮಣ್ಣು ಪಾಲಾಯಿತು’ ಎಂದು ಹಾವೇರಿ ತಾಲ್ಲೂಕಿನ ಆಲದಕಟ್ಟಿ ಗ್ರಾಮದ ರೈತ ಶೇಖಪ್ಪ ಕೋರಿಶೆಟ್ಟರ್ ಅಳಲು ತೋಡಿಕೊಂಡರು.
‘ಗುತ್ತಿಗೆಯವರ ಹೆಚ್ಚುವರಿ ದರ, ಯಂತ್ರದ ವೆಚ್ಚ, ಟ್ರಾಕ್ಟರ್ ಬಾಡಿಗೆ, ಶೇಂಗಾ ತೊಳೆಯಲು ಕೂಲಿ ಕಾರ್ಮಿಕರ ದಿನಗೂಲಿ... ಈ ಎಲ್ಲವೂ ಈ ವರ್ಷದ ಹೆಚ್ಚುವರಿ ಖರ್ಚುಗಳು. ಅತಿಯಾದ ಮಳೆಯಿಂದ ಶೇಂಗಾ ಜೊಳ್ಳಾಗಿವೆ. ಪ್ರತಿ ವರ್ಷ ಎಕರೆಗೆ 20 ಚೀಲ ಸಿಗುತ್ತಿತ್ತು. ಈ ಬಾರಿ 10 ಚೀಲ ಸಿಕ್ಕಿವೆ. ಕಳೆದ ಬಾರಿ ಕ್ವಿಂಟಲ್ಗೆ5,500 ರಿಂದ ₹ 8,000 ಇದ್ದ ಮಾರುಕಟ್ಟೆ ದರ, ಈ ಬಾರಿ ₹ 4,000 ದಿಂದ ₹ 4,500 ಇದೆ. ಹೀಗಾಗಿ ಎಲ್ಲ ಕಡೆಯಿಂದಲೂ ನಮಗೆ ನಷ್ಟವೇ ಉಂಟಾಗಿದೆ’ ಎಂದರು.
‘ಬಿತ್ತನೆ ಬೀಜ, ಕೂಲಿ ಕಾರ್ಮಿಕರ ದಿನಗೂಲಿ ಎಲ್ಲ ಸೇರಿ ಎಕರೆಗೆ ₹ 20 ಸಾವಿರ ಖರ್ಚು ತಗಲುತ್ತಿತ್ತು. ಆದರೆ, ಈ ಬಾರಿ ₹ 35 ಸಾವಿರ ಖರ್ಚಾಗಿದೆ. ಮಾರುಕಟ್ಟೆ ದರ ನೋಡಿದರೆ ಹಾಕಿದ ಬಂಡವಾಳವೂ ಸಿಗದ ಪರಿಸ್ಥಿತಿ ಇದೆ. ನಮಗೆ ಲಾಭ ಅಂದ್ರೆ, ‘ಒಂದು ಟ್ರಾಕ್ಟರ್ ಶೇಂಗಾ ಹೊಟ್ಟು’ ಮಾತ್ರ. ಏಕೆಂದರೆ ಅದರ ಮಾರುಕಟ್ಟೆ ದರ ₹ 10 ಸಾವಿರ’ ಎಂದು ಲೆಕ್ಕಾಚಾರ ಬಿಡಿಸಿಟ್ಟರು ಆಲದಕಟ್ಟಿ ರೈತ ಮಲ್ಲಿಕಾರ್ಜುನ ಗಿರ್ಜಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.