ಹಾವೇರಿ: ‘ಹೆತ್ತ ತಂದೆ ತಾಯಂದಿರನ್ನು ಕಡೆಗಾಲದಲ್ಲಿ ಮಕ್ಕಳು ಸರಿಯಾಗಿ ಆರೈಕೆ ಮಾಡುತ್ತಿಲ್ಲ. ಇದು ಕಳವಳಕಾರಿ ಸಂಗತಿ. ತುತ್ತು ತಿನ್ನಿಸಿ ಬೆಳೆಸಿದವರನ್ನು ನೋಡಿಕೊಳ್ಳದಂಥ ಕಟುಕ ಮಕ್ಕಳು ಸಮಾಜದಲ್ಲಿದ್ದಾರೆ’ ಎಂದು ಶಾಸಕ ನೆಹರು ಓಲೇಕಾರ ವಿಷಾದ ವ್ಯಕ್ತಪಡಿಸಿದರು.
ಅಗಡಿ ಆನಂದವನಮಠದ ಚಿದಂಬರಮೂರ್ತಿ ಚಕ್ರವರ್ತಿ ಸ್ವಾಮೀಜಿಯವರ 82ನೇ ಹುಟ್ಟುಹಬ್ಬ ಅಂಗವಾಗಿನಾಗೇಂದ್ರನಮಟ್ಟಿಯಲ್ಲಿರುವ ಶ್ರೀಶಕ್ತಿ ವೃದ್ಧಾಶ್ರಮದ ನಿವಾಸಿಗಳಿಗೆ ಗುರುವಾರ ಊಟ ಮತ್ತು ಸ್ವೆಟರ್ ವಿತರಿಸಿ ಅವರು ಮಾತನಾಡಿದರು.
ಶ್ರೀಮಂತರು ತಮ್ಮ ಜನ್ಮದಿನವನ್ನು ಕಲ್ಯಾಣ ಮಂಟಪ, ಹೋಟೆಲ್ಗಳಲ್ಲಿ ವೈಭವಯುತವಾಗಿ ಆಚರಿಸಿಕೊಳ್ಳುತ್ತಾರೆ. ಎಲ್.ಎಸ್.ಕುಲಕರ್ಣಿ ಮತ್ತು ಬಹದ್ದೂರ್ ದೇಸಾಯಿ ಕುಟುಂಬದವರು ವೃದ್ಧಾಶ್ರಮದಲ್ಲಿ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಿರುವುದು ಅನುಕರಣೀಯ. ಇಲ್ಲಿನ ವೃದ್ಧಾಶ್ರಮದ ಆಶ್ರಿತರನ್ನು ನೋಡಿದಾಗ ತುಂಬಾ ನೋವಾಗುತ್ತದೆ. ಮಕ್ಕಳಿದ್ದರೂ ಅನಾಥ ಭಾವದಲ್ಲಿ ಬದುಕುವ ಇಂಥ ದುಸ್ಥಿತಿ ಯಾರಿಗೂ ಬರಬಾರದು ಎಂದು ನೋವಿನಿಂದ ನುಡಿದರು.
ವೃದ್ಧಾಶ್ರಮದ ಅಧೀಕ್ಷಕ ಕಾಳಪ್ಪ ಚಲವಾದಿ, ಕೆ.ಸಿ.ಕೋರಿ, ಹನುಮಂತನಾಯಕ ಬದಾಮಿ, ಬಾಬಣ್ಣ ಮಾಗಾವಿ, ಕೆ.ಮಂಜಣ್ಣ, ಕೃಷ್ಣ ಜವಳಿ, ಕುಶಣ್ಣ ಬ.ದೇಸಾಯಿ ಇತರರು ಇದ್ದರು.