ಹಾವೇರಿ:ನಗರದಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಹಾಗೂ ಕೋವಿಡ್-19 ನಿಯಮಾನುಸಾರ ನಡೆಸುವುದೇ ನನ್ನ ಮೊದಲ ಆದ್ಯತೆಯಾಗಿದೆ ಎಂದುಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಪ್ರಭುಲಿಂಗಪ್ಪ ಹಲಗೇರಿ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನ.21ರಂದು ನಡೆಯಲಿರುವ ಚುನಾವಣೆಯಲ್ಲಿ ಅಧಿಕ ಮತಗಳನ್ನು ನೀಡುವ ಮೂಲಕ ಕನ್ನಡ ತಾಯಿಯ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಹಾವೇರಿ ನಗರದಲ್ಲಿ ಜಿಲ್ಲಾ ಸಾಹಿತ್ಯ ಭವನ ನಿರ್ಮಿಸಲು ಶ್ರಮಿಸಲಾಗುವುದು. ಮಹಿಳಾ ಮತ್ತು ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸುವುದು. ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಿಸುವುದು. ದತ್ತಿ ನಿಧಿಯನ್ನು ಸಂಗ್ರಹಿಸಿ ಪರಿಚಯಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವುದು. ನಗರ ವೃತ್ತಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ, ಹುತಾತ್ಮ ಯೋಧರ ಪುತ್ಥಳಿಗಳನ್ನು ನಿರ್ಮಿಸಲು ಆದ್ಯತೆ ನೀಡುತ್ತೇನೆ ಎಂದರು.
ಕಾದಂಬರಿ ಪಿತಾಮಹ ಗಳಗನಾಥರ ಸ್ಮರಣೆಗಾಗಿ 'ಗಳಗನಾಥ ಪ್ರಶಸ್ತಿ’, ‘ಹೆಳವನಕಟ್ಟಿ ಗಿರಿಯಮ್ಮ’ ಪ್ರಶಸ್ತಿಗಳನ್ನು ಸ್ಥಾಪಿಸಿ, ರಾಜ್ಯ ಮಟ್ಟದಲ್ಲಿ ಕವಿ, ಸಾಹಿತಿ, ಕಲಾವಿದರನ್ನು, ಕಂಚಿನ ಪದಕ, ಪ್ರಶಸ್ತಿ ಪತ್ರ ಹಾಗೂ ₹50 ಸಾವಿರ ನಗದು ಪುರಸ್ಕಾರದೊಂದಿಗೆ ಸತ್ಕರಿಸುವಂತೆ ಕೇಂದ್ರ ಸಮಿತಿಗೆ ಒತ್ತಾಯಿಸುತ್ತೇನೆ ಎಂದರು.