ಹಾವೇರಿ: ನ್ಯೂ ಇಂಡಿಯಾ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ಕಬಡ್ಡಿ ಅಸೋಸಿಯೇಷನ್ ಹಾಗೂ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಜ್ಯೂನಿಯರ್ ಕಬಡ್ಡಿ ಚಾಂಪಿಯನ್ಷಿಪ್–2019–20 ಬಾಲಕ ಹಾಗೂ ಬಾಲಕಿಯರ ಕ್ರೀಡಾಕೂಟಕ್ಕೆ ಶುಕ್ರವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ಧೂರಿಯಗಿ ಚಾಲನೆ ನೀಡಲಾಯಿತು.
ರಾಜ್ಯದ 28 ಜಿಲ್ಲೆಗಳ ಬಾಲಕ ಮತ್ತು ಬಾಲಕಿಯರ ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು. ಶುಕ್ರವಾರದಿಂದ ಆರಂಭಗೊಂಡಿರುವ ಟೂರ್ನಿಯು ಡಿ.14 ಮತ್ತು 15ರವರೆಗೆ ನಡೆಯಲಿದೆ. ಡಿ.15ರ ಸಂಜೆ 6ಕ್ಕೆ ಸಮಾರೋಪ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ ಎಂದು ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಶೆಟ್ಟರ ತಿಳಿಸಿದರು.
ಇಲ್ಲಿ ಪ್ರಶಸ್ತಿ ಗಳಿಸಿದತಲಾ 12 ಬಾಲಕ ಮತ್ತು ಬಾಲಕಿಯರನ್ನು ರಾಷ್ಟ್ರಮಟ್ಟದ ಟೂರ್ನಿಗೆ ಆಯ್ಕೆ ಮಾಡಲಾಗುತ್ತದೆ. ಇವರುಹರಿಯಾಣದಲ್ಲಿನಡೆಯುವ ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದಾರೆ. ಒಂದು ತಂಡದಲ್ಲಿ 12 ಮಂದಿ ಆಟಗಾರರು ಇರುತ್ತಾರೆ.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವಕಬಡ್ಡಿ ಸ್ಪರ್ಧೆಗಳು ಬೆಳಿಗ್ಗೆ 8ರಿಂದ 11 ಗಂಟೆಯವರೆಗೆ ಹಾಗೂ ಸಂಜೆ 4ರಿಂದ 10 ಗಂಟೆಯವರೆಗೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಎಂ.ವಿ. ಪ್ರಸಾದಬಾಬು ಟೂರ್ನಿಗೆ ಚಾಲನೆ ನೀಡಿದರು.ಶಾಸಕ ನೆಹರು ಓಲೆಕಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಅಂತರರಾಷ್ಟ್ರೀಯ ಕಬಡ್ಡಿ ತರಬೇತುದಾರ ಈಶ್ವರ ಅಂಗಡಿ, ಜಿಲ್ಲಾ ಖಜಾಂಜಿ ಶಿವಣ್ಣ ಜಂಗರೆಡ್ಡಿ ಇದ್ದರು.