ಶಿಗ್ಗಾವಿ: ‘ಸ್ರ್ತೀ ಪುರುಷರಲ್ಲಿ ಸಮಾನತೆ ಮೂಡಿದಾಗ ಮಾತ್ರ ಬದುಕು ಗಟ್ಟಿಗೊಳ್ಳಲು ಸಾಧ್ಯ. ಹೆಣ್ಣು ಮಕ್ಕಳೂ ಪುರುಷರಿಗೆ ಸಮಾನವಾಗಿ ದುಡಿಯುವ ಸಾಮರ್ಥ್ಯ ಹೊಂದಿದ್ದಾರೆ’ ಎಂದು ರಂಗಕರ್ಮಿ ಬಿ.ಜಯಶ್ರೀ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಶಿಶುವಿನಾಳದ ಗುರುಗೋವಿಂದ ಭಟ್ಟ ಹಾಗೂ ಸಂತ ಶರೀಫ ವೇದಿಕೆಯಲ್ಲಿ ಹುಬ್ಬಳ್ಳಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಭಾನುವಾರ ನಡೆದ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ‘ತಾಯಿ ನೋವನ್ನು ಸಹಿಸಿಕೊಂಡು ಮಕ್ಕಳಿಗಾಗಿ ಮಾಡುವ ಸೇವೆ ನಿಜಕ್ಕೂ ಶ್ರೇಷ್ಠ’ ಎಂದರು.
ಎಚ್.ಆರ್. ಸುಜಾತಾ ಅವರ ‘ನೀಲಿ ಮೂಗಿನ ನತ್ತು’ ಕೃತಿಗೆ ಅಕ್ಕ ಪ್ರಶಸ್ತಿ, ಸನ್ನಿಧಿ ಟಿ.ರೈ ಪೆರ್ಲ ಅವರ ‘ಅಮರಾವತಿ’ ಕೃತಿಗೆ ಅರಳುಮೊಗ್ಗು ಪ್ರಶಸ್ತಿ ಹಾಗೂ ಡಾ.ಕೆ. ಶಶಿಕಾಂತ ಅವರ ‘ಅವ್ವ ಹಾಡಿದ ಕಾಳಿಂಗರಾಯನ ಹಾಡು’ ಕೃತಿಗೆ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಲೇಖಕ ಚಂದ್ರಶೇಖರ ವಸ್ತ್ರದ ಸಂಪಾದಿಸಿದ ‘ನಾಟಕಗಳಲ್ಲಿ ಅವ್ವ’ ಕೃತಿಯನ್ನು ಸಾಹಿತಿ ಡಾ.ವೀರಣ್ಣ ರಾಜೂರ ಬಿಡುಗಡೆ ಮಾಡಿದರು.
ಸಂಸದ ಶಿವಕುಮಾರ ಉದಾಸಿ, ಮಾಜಿ ಸಂಸದ ಐ.ಜಿ. ಸನದಿ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಮನು ಬಳಿಗಾರ, ಚನ್ನಮ್ಮ ಬೊಮ್ಮಾಯಿ ಇದ್ದರು.