ರಾಣೆಬೆನ್ನೂರು: ‘ಯುವಕರು ಎಲ್ಲ ರೀತಿಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು. ಇದರಿಂದ ಅವರಲ್ಲಿ ಸಕಾರಾತ್ಮಕ ಗುಣ ಹೆಚ್ಚುತ್ತದೆ’ ಎಂದು ಆರ್ಟಿಇಎಸ್ ಸಂಸ್ಥೆಯ ಅಧ್ಯಕ್ಷ ಸುಭಾಸ ಸಾವುಕಾರ ಹೇಳಿದರು.
ನಗರದ ರಾ.ತಾ.ಶಿ ಸಂಸ್ಥೆಯ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಗುರುವಾರ ಬಿಇಡ್ ಕಾಲೇಜು, ಕಾನೂನು ಪದವಿ ಮಹಾವಿದ್ಯಾಲಯ, ನೆಹರೂ ಯುವ ಕೇಂದ್ರ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಐಕ್ಯೂಎಸಿ ಆಶ್ರಯದಲ್ಲಿ ನಡೆದ ನೆರೆ–ಹೊರೆ ಯುವ ಸಂಸತ್– 2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಯುವಜನತೆ ಮನಸ್ಸು ಮಾಡಿದರೆ ದೇಶದ ಭವಿಷ್ಯವನ್ನೇ ಬದಲಾಯಿಸಬಹುದು. ಅವರು ಆತ್ಮಪೂರ್ವಕವಾಗಿ ಶಕ್ತಿ ಒಗ್ಗೂಡಿಸಿದಲ್ಲಿ ಉತ್ತಮ ಅಭಿವೃದ್ಧಿ ಸಾಧ್ಯ’ ಎಂದರು.
ನೆಹರೂ ಯುವ ಕೇಂದ್ರದ ಜಿಲ್ಲಾ ಅಧಿಕಾರಿ ಭುಕ್ಯಾ ಸಂಜೀವ ಮಾತನಾಡಿ, ‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. ಯುವಜನತೆ ಮೂಲಕ ಎಲ್ಲೆಡೆ ಸ್ವಚ್ಛತೆ, ಆರೋಗ್ಯ, ಕ್ರೀಡೆ, ಸಂಸ್ಕೃತಿ ಬಗ್ಗೆ ತಿಳಿವಳಿಕೆ ಮೂಡಿಸಬೇಕು’ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಸೀತಾ ಕೋಟಿ ಅವರು ಮಹಿಳಾ ಸಬಲೀಕರಣ ಹಾಗೂ ನಾರಿಶಕ್ತಿ ಯೋಜನೆಯ ಮಹತ್ವ ಹಾಗೂ ಮಹಿಳಾ ಮೀಸಲಾತಿ, ನೆಹರೂ ಯುವ ಕೇಂದ್ರದ ನಿರ್ದೇಶಕಿ ಲತಾ ಬಿ.ಎಚ್. ಅವರು ಮೈ ಭಾರತ್ ಪೋರ್ಟಲ್ ನೋಂದಣಿ, ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ರಮೇಶ ಬಡಿಗೇರ ಅವರು ಜೀವನ ಕೌಶಲ ಹಾಗೂ ಗ್ರಾಮೀಣ ಅಭಿವೃದ್ಧಿ ಬಗ್ಗೆ ಮಾಹಿತಿ ನೀಡಿದರು.
ಎನ್ಎಸ್ಎಸ್ ಅಧಿಕಾರಿ ಸರಸ್ವತಿ ಎಚ್. ಬಮ್ಮನಾಳ ಅವರು ‘2047 ನನ್ನ ಕನಸಿನ ಭಾರತ’ ಹಾಗೂ ‘ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆ’ ಕುರಿತು ಉಪನ್ಯಾಸ ಮಾಡಿದರು. ಆರ್ಟಿಇಎಸ್ ಪದವಿ ಕಾಲೇಜಿನ ಪ್ರಾಚಾರ್ಯ ಸಿ.ಎ. ಹರಿಹರ ಅಧ್ಯಕ್ಷತೆ ವಹಿಸಿದ್ದರು. ಬಿಇಡಿ ಕಾಲೇಜಿನ ಪ್ರಾಚಾರ್ಯ ಕೋಟ್ರೇಶ ಬಸಾಪುರ ಮಾತನಾಡಿದರು.
ನೆಹರೂ ಯುವ ಕೇಂದ್ರದ ಸಿಬ್ಬಂದಿ ಹೆಮಗಿರಿ ಅಂಗಡಿ ಅವರು ವಿದ್ಯಾರ್ಥಿಗಳಿಗೆ ಬಹುಮಾನ, ಕಾಲೇಜಿಗೆ ಕ್ರೀಡಾ ಸಲಕರಣೆ ನೀಡಿದರು. ದೀಪಾ ಕೆ.ವಿ., ರೇಖಾ ಜಾಧವ, ಪಿ.ಬಿ. ಕೊಪ್ಪದ, ಮಧುಕುಮಾರ ಆರ್., ಅಂಜನಾ ಪವಾರ ಭಾಗವಹಿಸಿದ್ದರು.