ಹಾವೇರಿ: ಬೆಂಗಳೂರಿನಿಂದ ಬುಧವಾರ ಶಾಸಕ ಸಿ.ಎಂ. ಉದಾಸಿ ಅವರ ಪಾರ್ಥಿವ ಶರೀರವನ್ನು ಕುಮಾರಪಟ್ಟಣ, ರಾಣೆಬೆನ್ನೂರು ಮಾರ್ಗವಾಗಿ ಹಾವೇರಿ ನಗರಕ್ಕೆ ವಾಹನದ ಮೂಲಕ ತರಲಾಯಿತು.
ಪಾರ್ಥಿವ ಶರೀರವಿದ್ದ ವಾಹನದಲ್ಲೇ ಬೆಂಗಳೂರಿನಿಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಉದಾಸಿ ಪುತ್ರರಾದ ಸಂಸದ ಶಿವಕುಮಾರ ಉದಾಸಿ ಬಂದರು.
ಕುಮಾರಪಟ್ಟಣದ ಟೋಲ್ ಗೇಟ್ ಹತ್ತಿರ ಅವರ ಅಭಿಮಾನಿಗಳು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಹಾವೇರಿ ನಗರದಲ್ಲಿ ಮಧ್ಯಾಹ್ನ ಶಾಸಕ ನೆಹರು ಓಲೇಕಾರ ಹಾಗೂ ಬಿಜೆಪಿ ಮುಖಂಡರು ಪುಷ್ಪ ನಮನ ಸಲ್ಲಿಸಿದರು.
ಶಾಸಕ ಎಚ್.ಕೆ ಪಾಟೀಲ, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ ಹಾಗೂ ಕಾಂಗ್ರೆಸ್ ಮುಖಂಡರು ಅಂತಿಮ ದರ್ಶನ ಪಡೆದರು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ನೆರೆದಿದ್ದರು.
ಹಾವೇರಿ ನಗರದಿಂದ ಉದಾಸಿ ಅವರ ಸ್ವಕ್ಷೇತ್ರ ಹಾನಗಲ್ ಪಟ್ಟಣಕ್ಕೆ ಪಾರ್ಥಿವ ಶರೀರದ ವಾಹನ ತೆರಳಿತು.
ಸಂಜೆ 4 ಗಂಟೆಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.