ಹಾವೇರಿ: ಕುರಿ ಕಳ್ಳತನಕ್ಕೆ ಬಂದ ಖದೀಮರು ಕುರಿಗಾಹಿಯನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ರಾಣೆಬೆನ್ನೂರು ತಾಲ್ಲೂಕು ಗಂಗಾಪುರ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ.
ಕುರಿಗಾಹಿ ವೆಂಕಟೇಶ ಮತ್ತೂರು (50) ಮೃತಪಟ್ಟವರು. ಗ್ರಾಮದ ಸಮೀಪವಿರುವ ತನ್ನ ಜಮೀನಿನ ಕುರಿದೊಡ್ಡಿಯಲ್ಲಿ ಕುರಿಗಳ ರಕ್ಷಣೆಗಾಗಿ ನಿತ್ಯ ರಾತ್ರಿ ವೆಂಕಟೇಶ್ ಒಬ್ಬರೇ ಮಲಗುತ್ತಿದ್ದರು.
ಮಂಗಳವಾರ ರಾತ್ರಿ ಕುರಿಗಳನ್ನು ಕದಿಯಲು ಬಂದ ಖದೀಮರು ವೆಂಕಟೇಶ್ ಅವರನ್ನು ಹಗ್ಗದಿಂದ ಕಟ್ಟಿಹಾಕಿ ಥಳಿಸಿದ್ದಾರೆ. ಬಲವಾದ ಹೊಡೆತದಿಂದ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂತರ 40 ಕುರಿಗಳನ್ನು ಕದ್ದುಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ.
ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಶಾಸಕ ಅರುಣಕುಮಾರ ಪೂಜಾರ ಪೊಲೀಸರಿಗೆ ಸೂಚಿಸಿದ್ದಾರೆ. ಘಟನಾ ಸ್ಥಳಕ್ಕೆಎಸ್ಪಿ ಹನುಮಂತರಾಯ, ಸಿಪಿಐ ಶ್ರೀಶೈಲ ಚೌಗಲ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಕೋಳ ತಾಂಡಾದಲ್ಲಿ 15 ದಿನಗಳ ಹಿಂದೆ ಕುರಿಗಾಹಿಯನ್ನು ಬೆದರಿಸಿ,ಕುರಿದೊಡ್ಡಿಯಲ್ಲಿದ್ದ 30 ಕುರಿಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿತ್ತು.