ಹಾವೇರಿ: ‘ವಾಹನ ಚಲಾಯಿಸುವಾಗ ನಾನು ಸುರಕ್ಷಿತವಾಗಿದ್ದರೆ ನನ್ನ ಕುಟುಂಬ ಸುರಕ್ಷಿತ’ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ತಿಳಿಸಿದ್ದಾರೆ.
ನಗರದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಘಟಕದಲ್ಲಿ ಬುಧವಾರ ಫೆ.17ರವರೆಗೆ ಆಯೋಜಿಸಲಾದ 32ನೇ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ’ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಾಹನ ಚಲಾಯಿಸುವಾಗ ಬೇಜವಾಬ್ದಾರಿ, ನಿರ್ಲಕ್ಷ್ಯತನದಿಂದ ಚಾಲನೆ ಹಾಗೂ ಅನಧಿಕೃತವಾಗಿ ಪಾರ್ಕಿಂಗ್ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತವೆ. ಎಲ್ಲರೂ ರಸ್ತೆ ನಿಯಮಗಳನ್ನು ಪಾಲಿಸಿದಲ್ಲಿ ರಸ್ತೆ ಅಪಘಾತಗಳನ್ನು ತಡೆಯಬಹುದಾಗಿದೆ ಎಂದು ಹೇಳಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮಬಾಬಾ ಮುದ್ದೇಬಿಹಾಳ ಮಾತನಾಡಿ, ‘ಒತ್ತಡದಲ್ಲಿ ವಾಹನ ಚಾಲನೆ ಮಾಡುವುದರಿಂದ ರಸ್ತೆ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಾಹನ ಚಾಲಕರು ಸಂಯಮದಿಂದ ಸಮಚಿತ್ತದಿಂದ ವಾಹನ ಚಾಲನೆ ಮಾಡಬೇಕು’ ಎಂದು ಸಲಹೆ ನೀಡಿದರು.
ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್.ಜಗದೀಶ ಮಾತನಾಡಿ, ‘ಪರಿಸರ ಸಂರಕ್ಷಣೆಯತ್ತ ಎಲ್ಲರೂ ಗಮನಹರಿಸುವುದು ಅತ್ಯವಶ್ಯವಾಗಿದೆ. ಮಾನವ ಪರಿಸರ ನಾಶ ಮಾಡುತ್ತಿದ್ದರೆ ಮುಂದಿನ ಪೀಳಿಗೆಗ ಆಮ್ಲಜನಕದ ಕೊರತೆ ಉಂಟಾಗುವ ಸಂಭವವಿದೆ. ಕೂಡಲೇ ಎಲ್ಲರೂ ಜಾಗೃತರಾಗೋಣ’ ಎಂದು ಹೇಳಿದರು.
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ ಕಾಳೆಸಿಂಗೆ, ವಿಭಾಗೀಯ ಸಾರಿಗೆ ಅಧಿಕಾರಿ ಎಸ್.ಎಸ್. ಮುಜುಮದಾರ, ತಾಂತ್ರಿಕ ಶಿಲ್ಪಿ ಸಿ.ವಿ.ಇಟಗಿ ಮಾತನಾಡಿ, ಇಂಧನ ಉಳಿತಾಯ ಹಾಗೂ ರಸ್ತೆ ನಿಯಮಗಳ ಪಾಲನೆ ಬಗ್ಗೆ ವಾಹನ ಚಾಲಕರು ಗಮನಹರಿಸುವಂತೆ ಸಲಹೆ ನೀಡಿದರು.
ಘಟಕ ವ್ಯವಸ್ಥಾಪಕ ವ್ಯವಸ್ಥಾಪಕ ಎಚ್.ಡಿ.ಪೂಜಾರ, ಸ್ವಾಗತಿಸಿದರು. ಜಿ.ಬಿ.ಇಟಗಿ ನಿರೂಪಿಸಿದರು.