ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆಯ ಭಾಗ್ಯ

ಹಾವೇರಿ ಜಿಲ್ಲೆಯಲ್ಲಿ ಶೇ 100ರಷ್ಟು ಪ್ರಗತಿ: ಲಸಿಕೀಕರಣದಲ್ಲಿ ಸವಣೂರು ತಾಲ್ಲೂಕು ಮುಂಚೂಣಿ
Last Updated 15 ಜುಲೈ 2021, 8:43 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ಪದವಿ ಕಾಲೇಜಿನ ವಿದ್ಯಾರ್ಥಿಗಳು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಸೇರಿದಂತೆ ಒಟ್ಟು 23,885 ಮಂದಿಗೆ ‘ಕೋವಿಡ್‌ ಲಸಿಕೆ’ ಹಾಕುವ ಗುರಿ ಹೊಂದಿದ್ದ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಶೇ 100ರಷ್ಟು ಪ್ರಗತಿ ಸಾಧಿಸಿದೆ.

ರಾಜ್ಯ ಸರ್ಕಾರವು ಪದವಿ ಕಾಲೇಜು ಆರಂಭಿಸುವ ಮುನ್ನ 18 ವರ್ಷ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ಕೋವಿಡ್‌ ಲಸಿಕೆ ಹಾಕುವ ಗುರಿಯನ್ನು 30 ಜಿಲ್ಲೆಗಳ ಜಿಲ್ಲಾಡಳಿತಕ್ಕೆ ನೀಡಿತ್ತು. ಈ ಕೋವಿಡ್‌ ಲಸಿಕೀಕರಣ ಕಾರ್ಯದಲ್ಲಿ ಹಾವೇರಿ ಜಿಲ್ಲೆ ನಿಗದಿತ ಸಮಯದಲ್ಲಿ ಗುರಿ ಸಾಧಿಸಿದೆ.

‘ಕೋವಿಡ್‌ ಲಸಿಕೆಯ ವಿಶೇಷ ಅಭಿಯಾನವು’ ಜಿಲ್ಲೆಯಲ್ಲಿ ಜೂನ್‌ 28ರಂದು ಆರಂಭಗೊಂಡು, ಜುಲೈ 13ರ ವೇಳೆಗೆ ಅಂದರೆ 16 ದಿನಗಳಲ್ಲಿ ಪೂರ್ಣ ಗುರಿ ಸಾಧಿಸಿದೆ. ಒಟ್ಟು 22,167 ವಿದ್ಯಾರ್ಥಿಗಳು, 1,215 ಬೋಧಕ ಸಿಬ್ಬಂದಿ ಹಾಗೂ 691 ಬೋಧಕೇತರ ಸಿಬ್ಬಂದಿ ಸೇರಿ ಒಟ್ಟು 24,073 ಮಂದಿ ಲಸಿಕೆ ಪಡೆದಿದ್ದಾರೆ.

ಸವಣೂರು ಮುಂಚೂಣಿ:ಒಟ್ಟು 23,885 ಮಂದಿಗೆ ಲಸಿಕೆ ಹಾಕುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ, ಜುಲೈ 13ರ ವೇಳೆಗೆ 24,073 ಮಂದಿ ಲಸಿಕೆ ಪಡೆದಿದ್ದಾರೆ. ಅಂದರೆ, ಹೊರಜಿಲ್ಲೆಯ ವಿದ್ಯಾರ್ಥಿಗಳು ಹಾವೇರಿ ಜಿಲ್ಲೆಯಲ್ಲಿ ಲಸಿಕೆ ಪಡೆದ ಕಾರಣ ನಿಗದಿತ ಗುರಿಗಿಂತ ಹೆಚ್ಚುವರಿ ಮಂದಿಗೆ ಲಸಿಕೆ ನೀಡಿದಂತಾಗಿದೆ. ಸವಣೂರು ತಾಲ್ಲೂಕಿನಲ್ಲಿ 1,112 ನಿಗದಿತ ಗುರಿಗೆ 2,061 ಮಂದಿ ಲಸಿಕೆ ಪಡೆದಿದ್ದು, ಶೇ 185ರಷ್ಟು ಪ್ರಗತಿಯಾಗಿದೆ. ಲಸಿಕೀಕರಣದಲ್ಲಿ ಸವಣೂರು ತಾಲ್ಲೂಕು ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿದೆ.

40 ಪದವಿ ಕಾಲೇಜುಗಳು:‘14 ಸರ್ಕಾರಿ ಪದವಿ ಕಾಲೇಜು ಮತ್ತು 26 ಖಾಸಗಿ ಪದವಿ ಕಾಲೇಜುಗಳ ಜತೆಗೆ ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್‌, ಪಾಲಿಟೆಕ್ನಿಕ್‌ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಲಸಿಕೆ ಹಾಕಲಾಗಿದೆ. ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ‘ವಿಶೇಷ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿತ್ತು. ಸರ್ಕಾರಿ ಪದವಿ ಕಾಲೇಜುಗಳಿಗೆ ಗಾಂಧಿಪುರ ಪದವಿ ಕಾಲೇಜಿನ ಪ್ರಾಂಶುಪಾಲ ಬಿ.ಟಿ. ಲಮಾಣಿ ಹಾಗೂ ಖಾಸಗಿ ಪದವಿ ಕಾಲೇಜುಗಳಿಗೆ ಕೆಎಲ್‌ಇ ಸಂಸ್ಥೆಯ ಜಿ.ಎಚ್‌. ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಂಧ್ಯಾ ಕುಲಕರ್ಣಿ ಅವರನ್ನು ‘ನೋಡಲ್‌ ಆಫೀಸರ್‌’ಗಳನ್ನಾಗಿ ಜಿಲ್ಲಾಧಿಕಾರಿಗಳು ನೇಮಿಸಿದ್ದರು.

‘ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅಧ್ಯಕ್ಷತೆಯಲ್ಲಿ ಎಲ್ಲ ಕಾಲೇಜುಗಳ ಪ್ರಾಂಶುಪಾಲರ ಸಭೆ ನಡೆಸಿ, ಲಸಿಕೀಕರಣದ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಸೂಚನೆ ನೀಡಲಾಗಿತ್ತು. ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ, 23,885 ಮಂದಿಗೆ ಲಸಿಕೆ ಹಾಕುವ ಗುರಿ ಸಾಧಿಸಲು ಜಿಲ್ಲಾಡಳಿತ ಅಗತ್ಯ ನೆರವು ನೀಡಿತು. ಯಾರಾದರೂ ವಿದ್ಯಾರ್ಥಿಗಳು ಲಸಿಕೆ ಪಡೆಯದೇ ಇದ್ದರೆ, ಹತ್ತಿರದ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಬಹುದು’ಎಂದು ಜಿಲ್ಲಾ ಆರ್‌.ಸಿ.ಎಚ್‌. ಅಧಿಕಾರಿ ಡಾ.ಜಯಾನಂದ ತಿಳಿಸಿದರು.

ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ:‘ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್‌’ ತೋರಿಸಿದ ನಂತರವೇ ಕಾಲೇಜಿಗೆ ಪ್ರವೇಶ ನೀಡುತ್ತೇವೆ. ನಮ್ಮ ಕಾಲೇಜಿನಲ್ಲಿ 1200 ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದ 100 ವಿದ್ಯಾರ್ಥಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ಶೇ 97ರಷ್ಟು ವಿದ್ಯಾರ್ಥಿಗಳು ಲಸಿಕೆ ಪಡೆದಿದ್ದಾರೆ. ಕಾಲೇಜಿನ ಮೂವರು ಸಿಬ್ಬಂದಿ ಕೋವಿಡ್‌ನಿಂದ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ’ ಎಂದು ಜಿ.ಎಚ್‌. ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಂಧ್ಯಾ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

**

ಶೇ 50ರಷ್ಟು ಲಸಿಕೆಯನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮೀಸಲಿಟ್ಟಿದ್ದೆವು. ಕಾಲೇಜು ಆರಂಭಕ್ಕೆ ಮುನ್ನ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿದ್ದೇವೆ
– ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

**

ಕೋವಿಡ್‌ ಲಸಿಕೆ ಪಡೆದ ನಂತರವೂ ಕಾಲೇಜು ವಿದ್ಯಾರ್ಥಿಗಳು ಮಾಸ್ಕ್‌ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿರಬೇಕು.
– ಡಾ.ಜಯಾನಂದ, ಜಿಲ್ಲಾ ಆರ್‌.ಸಿ.ಎಚ್‌. ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT