ಹಾವೇರಿ:ಜನಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಜಯಂತಿ ಹಾಗೂ ಬಲಿದಾನ ದಿನದ ಅಂಗವಾಗಿ ಜಿಲ್ಲೆಯಾದ್ಯಂತ ಜೂನ್ 23ರಿಂದ ಜುಲೈ 6ರವರೆಗೆ ಕೈಗೊಂಡಿರುವ ‘ವೃಕ್ಷಾರೋಪಣ ಅಭಿಯಾನ’ಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಹಾವೇರಿ ನಗರ ಮಂಡಲದ ವತಿಯಿಂದ ತುಳಿಸಿ ಐಕಾನ್ನಲ್ಲಿರುವ ಸರ್ಕಾರಿ ಉದ್ಯಾನದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಶಾಸಕ ನೆಹರು ಓಲೇಕಾರ ಅವರೊಂದಿಗೆ ಗಿಡ ನೆಡುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದರು.
ಮಂಡಲ ಅಧ್ಯಕ್ಷ ಗಿರೀಶ ತುಪ್ಪದವರ ನೇತೃತ್ವದಲ್ಲಿ ನಗರದಲ್ಲಿ ಒಟ್ಟು 1040 ಗಿಡಗಳನ್ನು ನೆಡುವ ಕಾರ್ಯ ಯೋಜನೆ ರೂಪಿಸಲಾಗಿದೆ. ಕಾಕೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ ಅವರೊಂದಿಗೆ ಗಿಡ ಹಚ್ಚುವ ಮೂಲಕ ಬ್ಯಾಡಗಿ ಮಂಡಲದಲ್ಲಿ 4,800 ಸಸಿಗಳನ್ನು ನೆಡುವ ಗುರಿಯನ್ನು ಮಂಡಲದ ಅಧ್ಯಕ್ಷರಿಗೆ ಸಿದ್ದರಾಜ ಕಲಕೋಟಿ ನೀಡಿದರು.
ಹಾವೇರಿ ಗ್ರಾಮೀಣ ಮಂಡಲದ ಗಾಂಧಿಪುರ ಗ್ರಾಮದಲ್ಲಿನ ಪದವಿ ಕಾಲೇಜಿನ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಸಿ ನೆಟ್ಟು ಪ್ರತಿ ಬೂತ್ನಲ್ಲಿ ಕನಿಷ್ಠ 20 ಸಸಿಗಳನ್ನು ಹಚ್ಚುವಂತೆ ಕಾರ್ಯಕರ್ತರಿಗೆ ಮನವಿ ಮಾಡಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ ಮುಳ್ಳೂರ, ಶಶಿಧರ ಹೊಸಳ್ಳಿ, ಜಿಲ್ಲಾ ಉಪಾಧ್ಯಕ್ಷ ವಿರೇಂದ್ರ ಶೆಟ್ಟರ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ರಮೇಶ ಪಾಲನಕರ, ಮುಖಂಡರು, ಕಾರ್ಯಕರ್ತರು ಇದ್ದರು.