ಚಿಂಚೋಳಿ (ಕಲಬುರಗಿ): ತಾಲ್ಲೂಕಿನ ಹಸರಗುಂಡಗಿ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 240 ಕ್ವಿಂಟಲ್ ಅನ್ನ ಭಾಗ್ಯದ ಪಡಿತರ ಅಕ್ಕಿ ಜಪ್ತಿ ಮಾಡಿ, ಒಬ್ಬರನ್ನು ಬಂಧಿಸಲಾಗಿದೆ.
ಹಸರಗುಂಡಗಿ ಗ್ರಾಮದ ಶರಣಸಿದ್ದಪ್ಪ ಶಂಕ್ರಪ್ಪ ಹೀರಾಪುರ ಬಂಧಿತ ಆರೋಪಿ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶರಣಸಿದ್ದಪ್ಪ ಅವರ ಮನೆಯ ಎರಡು ಕೊಠಡಿಗಳಲ್ಲಿ 480 ಪ್ಲಾಸ್ಟಿಕ್ ಚೀಲಗಳಲ್ಲಿ ಸುಮಾರು 240 ಕ್ವಿಂಟಲ್ ಪಡಿತರ ಅಕ್ಕಿ ಪತ್ತೆಯಾಗಿದೆ. ಅಕ್ಕಿ ದಾಸ್ತಾನಿಗೆ ಯಾವುದೇ ದಾಖಲೆ ಪತ್ರ ಹಾಗೂ ಪರವಾನಗಿ ಇರಲಿಲ್ಲ ಎಂದು ಆಹಾರ ನಿರೀಕ್ಷಕ ರಾಜು ಪಂಚಾಳ ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಬುಧವಾರ ಮಧ್ಯಾಹ್ನ 2.30ಕ್ಕೆ ಆಹಾರ ಇಲಾಖೆಯ ರಾಜು ಪಂಚಾಳ ಮತ್ತು ಚಿಂಚೋಳಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಿದ್ದೇಶ್ವರ ಗಿರಡೆ, ರಮೇಶ, ಅಮೀರ್ ಅಲಿ, ನಾಗರಾಜ ಶೆಳಕೆ ಅವರಿದ್ದ ತಂಡ ದಾಳಿ ಮಾಡಿತು. ಈ ವೇಳೆ ಒಬ್ಬರ ಬಂಧಿನವಾಗಿದ್ದು, ಮತ್ತೊಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ