ಕಲಬುರಗಿ: ನಗರದ ಹೊರವಲಯದ ಹೈಕೋರ್ಟ್ ಹಿಂಬದಿ ಶರಣ ಸಿರಸಗಿ ಮಡ್ಡಿಯಲ್ಲಿರುವ ಕಾಶಿ ಕಮಲ್ ಅಪಾರ್ಟ್ಮೆಂಟ್ನಲ್ಲಿ ಗುರುವಾರ ಮಧ್ಯರಾತ್ರಿ ಸರಣಿ ಕಳವು ನಡೆದಿದ್ದು, ಎರಡು ಮನೆಗಳ ಬೀಗ ಒಡೆದು ₹ 7.90 ಲಕ್ಷದ ಚಿನ್ನಾಭರಣ ಹಾಗೂ ನಗದು ದೋಚಿ ಹೋಗಿದ್ದಾರೆ.
ರಮೇಶ ಮಹಾದೇವಪ್ಪ ಪಾಟೀಲ ಅವರ ಮನೆಯಲ್ಲಿರಿಸಿದ್ದ ₹ 5.25 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಹಣ, ಡಾ. ಮಲ್ಲಿಕಾರ್ಜುನ ಕೃಷ್ಣಾಕರ್ ಎಂಬುವವರ ಮನೆಯಲ್ಲಿರಿಸಿದ್ದ ₹ 2.65 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.
ಅಫಜಲಪುರದ ವಿಕೆಜಿ ನಗರದ ನಿವಾಸಿ ರಮೇಶ ಮಹಾದೇವಪ್ಪ ಪಾಟೀಲ ಅವರ ಕಾಶಿ ಕಮಲ್ ಅಪಾರ್ಟ್ಮೆಂಟ್ನ ಫ್ಲ್ಯಾಟ್ಗೆ ನುಗ್ಗಿದ ಕಳ್ಳರು ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ₹ 1.80 ಲಕ್ಷ ಮೌಲ್ಯದ 45 ಗ್ರಾಂನ ಒಂದು ಬಂಗಾರದ ತಾಳಿ ಚೈನ್, ₹ 60 ಸಾವಿರ ಮೌಲ್ಯದ 15 ಗ್ರಾಂನ ಒಂದು ಬಂಗಾರದ ಗುಂಡಿನ ಸರ, ₹ 1 ಲಕ್ಷ ಮೌಲ್ಯದ 25 ಗ್ರಾಂನ ನಾಲ್ಕು ಜೊತೆ ಬಂಗಾರದ ಕಿವಿ ಓಲೆಗಳು, ₹ 40 ಸಾವಿರ ಮೌಲ್ಯದ 10 ಗ್ರಾಂನ ಎರಡು ಬಂಗಾರದ ಉಂಗುರಗಳು, ₹ 40 ಸಾವಿರ ಮೌಲ್ಯದ 10 ಗ್ರಾಂನ ಒಂದು ಬಂಗಾರದ ತಾಳಿ ಚೈನ್, ₹ 40 ಸಾವಿರ ಮೌಲ್ಯದ 10 ಗ್ರಾಂನ ಒಂದು ಬಂಗಾರದ ಲಾಕೇಟ್, ₹ 15 ಸಾವಿರ ಮೌಲ್ಯದ 250 ಗ್ರಾಂನ ಬೆಳ್ಳಿ ಆಭರಣಗಳು, ನಗದು ಹಣ ₹ 50 ಸಾವಿರ ಸೇರಿ ಒಟ್ಟು ₹ 5.25 ಲಕ್ಷ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಅದೇ ಅಪಾರ್ಟ್ಮೆಂಟ್ನ ಡಾ. ಮಲ್ಲಿಕಾರ್ಜುನ ಅವರ ಮನೆಗೆ ನುಗ್ಗಿದ ಕಳ್ಳರು ಮನೆಯ ಅಲ್ಮೇರಾದಲ್ಲಿ ಇಟ್ಟಿದ್ದ ತಲಾ ₹ 1 ಲಕ್ಷ ಮೌಲ್ಯದ 5 ಗ್ರಾಂ ತೂಕದ 4 ಬಂಗಾರದ ಸುತ್ತುಂಗುರಗಳು, ₹ 1 ಲಕ್ಷ ಮೌಲ್ಯದ ತಲಾ 10 ಗ್ರಾಂನ 2 ಬಂಗಾರದ ಲಾಕೇಟ್ಗಳು, ₹ 50 ಸಾವಿರ ಮೌಲ್ಯದ ಒಂದು ಜೊತೆ ಬಂಗಾರದ ಕಿವಿ ಓಲೆಗಳು ಹಾಗೂ ₹ 15 ಸಾವಿರ ಮೌಲ್ಯದ 250 ಗ್ರಾಂ ಬೆಳ್ಳಿಯ ಆಭರಣಗಳು ಸೇರಿ ಒಟ್ಟು ₹ 2.65 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಅತಿ ದೊಡ್ಡ ಮೊತ್ತದ ಕಳ್ಳತನ ಇದಾಗಿದೆ. ಅಶೋಕ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಾರ್ಟ್ಮೆಂಟ್ನಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾ ಇರಲಿಲ್ಲ. ಇದನ್ನು ಗಮನಿಸಿದ ಕಳ್ಳರು ಅಪಾರ್ಟ್ಮೆಂಟ್ ಹಿಂಬದಿಯ ಫ್ಲ್ಯಾಟ್ಗಳನ್ನು ಗುರಿಯಾಗಿಸಿ ಕಳ್ಳತನ ಮಾಡಿದ್ದಾರೆ. ಕಳ್ಳರ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ
ಚೇತನ್ ಆರ್.
ಕಲಬುರಗಿ ಪೊಲೀಸ್ ಕಮಿಷನರ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.