ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

85ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಬದಲಾವಣೆಗೆ ಹೆಚ್ಚಿದ ಕೂಗು

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಸ್ವಾಗತ ಸಮಿತಿ ರಚನೆ
Last Updated 12 ಡಿಸೆಂಬರ್ 2019, 13:28 IST
ಅಕ್ಷರ ಗಾತ್ರ

ಕಲಬುರ್ಗಿ: ಬರುವ ಫೆ. 5ರಿಂದ ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ರಚಿಸಲಾಗಿದೆ.

ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸ್ವಾಗತ ಸಮಿತಿಗಳ ರಚನೆಯನ್ನು ಪ್ರಕಟಿಸಲಾಯಿತು.

ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹಾಗೂ ಕಾರ್ಯಾಧ್ಯಕ್ಷರಾಗಿ ಕಲಬುರ್ಗಿ ಗ್ರಾಮೀಣ ಮೀಸಲು ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ ಅವರ ಆಯ್ಕೆಯನ್ನು ಸಭೆಯಲ್ಲಿ ಘೋಷಿಸಲಾಯಿತು.

ಅದೇ ರೀತಿ ಆಹಾರ ಸಮಿತಿ, ಮೆರವಣಿಗೆ ಸಮಿತಿ, ವಸತಿ ಮತ್ತು ಸಾರಿಗೆ ಸಮಿತಿ, ಪ್ರಚಾರ ಸಮಿತಿ ಸೇರಿದಂತೆ ಒಟ್ಟಾರೆ 16ಸಮಿತಿಗಳನ್ನು ರಚಿಸಲಾಯಿತು.

ಸ್ವಾಗತ ಸಮಿತಿಯ ಪದಾಧಿಕಾರಿಗಳ ಈಗಿನ ಪಟ್ಟಿಯೇ ಅಂತೀಮವಲ್ಲ. ಕೆಲಸ ಮಾಡುವ ಇನ್ನಷ್ಟು ಸದಸ್ಯರನ್ನು ಸೇರ್ಪಡೆ ಮಾಡಬಹುದಾಗಿದೆ ಎಂದು ಡಿಸಿಎಂ ಸಭೆ ಗಮನಕ್ಕೆ ತಂದರಲ್ಲದೇ ಕೆಲವರ ಹೆಸರು ತೆಗೆಯಬೇಕೆನ್ನುವ ವಿಷಯ ಮುಂದಿಟ್ಟುಕೊಂಡು ವಿನಾಕಾರಣ ವಿವಾದ ಮಾಡಬೇಡಿ ಎಂದು ಕಿವಿ ಮಾತು ಹೇಳಿದರು.

ಹಸ್ತಕ್ಷೇಪ ಇಲ್ಲ:ಸಭೆಯಲ್ಲಿ ಸಮ್ಮೇಳನಕ್ಕೆ ಕಡಿಮೆ ಅವಧಿ ಇರುವುದರಿಂದ ಸಮ್ಮೇಳನ ಸ್ವಲ್ಪ ದಿನ ಕಾಲ ಮುಂದೂಡಬೇಕು ಜತೆಗೆ ಸಮ್ಮೇಳನಾಧ್ಯಕ್ಷರಾಗಿ ಡಾ. ಎಚ್.ಎಸ್. ವೆಂಕಟೇಶ್ ಮೂರ್ತಿ ಆಯ್ಕೆಗೆ ವಿರೋಧ ವಿರುವುದರಿಂದ ಕಲ್ಯಾಣ ಕರ್ನಾಟಕದ ಭಾಗದವರನ್ನು ಆಯ್ಕೆ ಮಾಡಬೇಕೆಂದು ಸಭೆಯಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.

ಇದಕ್ಕೆ ಗೋವಿಂದ ಕಾರಜೋಳ, ‘ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಣಯಕ್ಕೆ ಸಂಬಂಧಿಸಿದಂತೆ ತಾವು ಹಸ್ತಕ್ಷೇಪ ಮಾಡುವುದಿಲ್ಲ. ಹೀಗಾಗಿ ದಿನಾಂಕ ಬದಲಾವಣೆ ಹಾಗೂ ಸಮ್ಮೇಳನ ಅಧ್ಯಕ್ಷರ ಬದಲಾವಣೆಗೆ ನಾನು ಏನು ಹೇಳುವುದಿಲ್ಲ’ ಎಂದರು

’ಈ ಹಿಂದೆ 1995ರಲ್ಲಿ ಮುಧೋಳದಲ್ಲಿ ಅಖಿಲ ಭಾರತ 64ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ ನೆರವೇರಿಸಿದಾಗ ಸಮ್ಮೇಳನ ಹಾಗೂ ವೇದಿಕೆ ಎಲ್ಲ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್ತಿನವರಿಗೆ ಸಂಪೂರ್ಣ ಅವಕಾಶ ಕಲ್ಪಿಸಲಾಗಿತ್ತು.‌ ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಾಗಲೂ ಪರಿಷತ್ತಿನ ಕಾರ್ಯಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಿಲ್ಲ.‌ ಹೀಗಾಗಿ ಕಲಬುರ್ಗಿಯ ಸಮ್ಮೇಳನದಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಸಿದ್ದತೆ ಹಾಗೂ ಅಗತ್ಯ ಅನುದಾನ ಕಲ್ಪಿಸಲು ಹೆಚ್ಚಿನ ನಿಟ್ಟಿನಲ್ಲಿ ಶ್ರಮಿಸಲಾಗುವುದು’ ಎಂದು ವಿವರಣೆ ನೀಡಿದರು.

ಸಭೆಯಲ್ಲಿ ಪಾಲ್ಗೊಂಡ ಸಾಹಿತಿಗಳು ಹಲವು ಸಲಹೆಗಳನ್ನು ನೀಡಿದರು.ಇತ್ತೀಚಿಗೆ ಅಗಲಿದ ಹಿರಿಯ ಸಾಹಿತಿ ಡಾ. ಚೆನ್ನಣ್ಣ ವಾಲೀಕಾರ ಅವರಿಗೆ ಸಭೆಯಲ್ಲಿ ಎರಡು ನಿಮಿಷ ಮೌನಾಚರಿಸಿ ಶೃದ್ಧಾಂಜಲಿ ಸಲ್ಲಿಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಬಿ. ಶರತ್, ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ಹಿರಿಯ ಸಾಹಿತಿಗಳಾದ ಪ್ರೊ. ವಸಂತ ಕುಷ್ಠಗಿ, ಡಾ. ಸ್ವಾಮಿರಾವ ಕುಲಕರ್ಣಿ, ಅಪ್ಪಾರಾವ ಅಕ್ಕೋಣಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT