ಅಫಜಲಪುರ: ‘ತಾಲ್ಲೂಕಿನ ಬಡದಾಳ ಗ್ರಾಮದಿಂದ ಅರ್ಜುನಗಿ ತಾಂಡಾದವರೆಗಿನ ರಸ್ತೆಯ ಡಾಂಬರ್ ಐದೇ ತಿಂಗಳಲ್ಲಿಯೇ ಕಿತ್ತು ಹೋಗಿದ್ದು ಎಲ್ಲಾ ರಸ್ತೆಗಳು ಕಳಪೆ ಕಾಮಗಾರಿಯಿಂದ ಹಾಳಾಗುತ್ತಿವೆ. ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಪರಿಶೀಲನೆ ಮಾಡಿ ಕ್ರಮ ಜರುಗಿಸಬೇಕು’ ಎಂದು ಬಡದಾಳ ನಾಗರಿಕ ಹೋರಾಟ ಸಮಿತಿ ಆಗ್ರಹಿಸಿದೆ.
‘ಬಡದಾಳ ಗ್ರಾಮ ತಾಲ್ಲೂಕು ಕೇಂದ್ರದಿಂದ 15 ಕಿ.ಮೀ ದೂರದಲ್ಲಿದೆ. ರೇವೂರ(ಬಿ), ಚಿಂಚೋಳಿ, ಬಳೂರ್ಗಿ, ಅರ್ಜುಣಗಿ ಗ್ರಾಮಗಳಿಗೆ 4 ಕಿ.ಮೀ ದೂರದಲ್ಲಿದೆ. ರಸ್ತೆಗಳು ಸುಸ್ಥಿತಿಯಲ್ಲಿಲ್ಲ. ವಾಹನಗಳು ಸವಾರರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡದಾಳ ಗ್ರಾಮದಿಂದ ಅರ್ಜುಣಗಿ ಗ್ರಾಮ ಸಂಪರ್ಕಿಸುವ ರಸ್ತೆಯನ್ನು ಕೆಲವು ತಿಂಗಳ ಹಿಂದಷ್ಟೇ ನಿರ್ಮಿಸಿ ಕಾಮಗಾರಿ ಅಪೂರ್ಣ ಮಾಡಲಾಗಿದೆ. ಈಗ ಡಾಂಬರ್ ಕಿತ್ತುಕೊಂಡು ಹೋಗಿದೆ. ಹೊಸ ರಸ್ತೆ ನಿರ್ಮಿಸುವ ಭರವಸೆ ಕೊಟ್ಟವರು ನಾಪತ್ತೆಯಾಗಿದ್ದಾರೆ. ಅನುದಾನ ಖರ್ಚಾದರೂ ಗುಣಮಟ್ಟದ ರಸ್ತೆ ಆಗಲಿಲ್ಲ’ ಎಂದು ಸಮಿತಿ ಸದಸ್ಯರು ದೂರಿದರು.
ಬಡದಾಳ ಗ್ರಾಮದಿಂದ ಅರ್ಜುನಗಿ ತಾಂಡದವರಿಗೆ ರಸ್ತೆ ಹಾಳದ ಬಗ್ಗೆ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಾಬುರಾವ್ ಜ್ಯೋತಿ ಅವರನ್ನು ವಿಚಾರಿಸಿದಾಗ, ‘ನಾನು ಇಲಾಖೆಗೆ ಬರುವುದಕ್ಕಿಂತಲೂ ಮುಂಚಿತವಾಗಿ ಮಾಡಿರುವ ರಸ್ತೆಯಾಗಿದ್ದು ನನ್ನ ಅವಧಿಯಲ್ಲಿ ಯಾವುದೇ ರಸ್ತೆ ಹಾಳಾಗಿಲ್ಲ’ ಎಂದು ತಿಳಿಸಿದರು.