ಕಲಬುರ್ಗಿ: ಭೀಮಾ ಕೋರೆಗಾಂವ್ 203ನೇ ವಿಜಯೋತ್ಸವದ ಅಂಗವಾಗಿ ಕರ್ನಾಟಕ ನೃತ್ಯ ಸಂಗೀತ ಕಲಾ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ಸೈನ್ಯದ ವತಿಯಿಂದ ಜನವರಿ 1ರಂದು ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಡವರಿಗೆ ಬೆಡ್ಷೀಟ್ ವಿತರಣೆ ಆಯೋಜಿಸಲಾಗಿದೆ ಎಂದು ಸಂಘಾನಂದ ಭಂತೇಜಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಲಿತರ ಸ್ವಾಭಿಮಾನವನ್ನು ಬಡಿದೆಬ್ಬಿಸುವ ನಿಟ್ಟಿನಲ್ಲಿ ಸಂಘಟನೆ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು.
ಕಲ್ಯಾಣ ಕರ್ನಾಟಕ ಸೈನ್ಯದ ರಾಜ್ಯ ಘಟಕದ ಅಧ್ಯಕ್ಷ ದತ್ತು ಹೈಯಾಳಕರ್, ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ, ಶಾಸಕರಾದ ಖನೀಜ್ ಫಾತಿಮಾ, ಬಸವರಾಜ ಮತ್ತಿಮಡು, ಶಶೀಲ್ ಜಿ. ನಮೋಶಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕರ್ನಾಟಕ ನೃತ್ಯ ಸಂಗೀತ ಕಲಾ ಸಂಸ್ಥೆ ಅಧ್ಯಕ್ಷ ಮುತ್ತಣ್ಣ ಎಂ. ಭಾಗೋಡಿ, ರಮೇಶ ಸ್ವಾಮಿ, ಮಲ್ಲಿಕಾರ್ಜುನ, ಸಂತೋಷ ಇದ್ದರು.