ಸೇಡಂ: ‘ಪ್ರಸ್ತುತ ಸಂದರ್ಭದಲ್ಲಿ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯಿಂದಾಗಿ ಪ್ರತಿಕ್ಷಣಕ್ಕೂ ರಕ್ತದ ಅವಶ್ಯಕತೆ ಹೆಚ್ಚುತ್ತಿದೆ. ಆದ್ದರಿಂದ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸಬೇಕು’ ಎಂದು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ್ ಹೇಳಿದರು.
ಪಟ್ಟಣದ ನಿಸರ್ಗ ಆಸ್ಪತ್ರೆಯಲ್ಲಿ ಸೋಮವಾರ ವಿಶ್ವಹಿಂದೂ ಪರಿಷತ್ ತಾಲ್ಲೂಕು ಘಟಕ, ಭಜರಂಗದಳ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
‘ವೈದ್ಯರ ಪ್ರಕಾರ ಒಬ್ಬ ವ್ಯಕ್ತಿ ರಕ್ತದಾನ ಮಾಡಿದಲ್ಲಿ ಆತನ ಆರೋಗ್ಯ ಚೆನ್ನಾಗಿರುತ್ತದೆ. ಅಲ್ಲದೆ ಹೊಸ ರಕ್ತ ಉತ್ಪತ್ತಿಯಾಗಿ, ಮಾನವನ ತೇಜಸ್ಸು ಹೆಚ್ಚುತ್ತದೆ’ ಎಂದು ತಿಳಿಸಿದರು.
ವಿಶ್ವಹಿಂದೂ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಮುಸ್ತಾಜರ್ ಮಾತನಾಡಿ, ‘ವಿಶ್ವಹಿಂದೂ ಪರಿಷತ್ ರಕ್ತದಾನ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುವುದರ ಮೂಲಕ ಸಮಾಜಕ್ಕೆ ತನ್ನದೇಆದ ಕೊಡುಗೆ ನೀಡುತ್ತಿದೆ’ ಎಂದರು.
ಲಯನ್ಸ್ ಕ್ಲಬ್ನ ಶ್ರೀನಿವಾಸ ಮೊಕದಮ್, ಡಾ.ಕೀರ್ತಿ ಪಾಟೀಲ, ಸಚಿನ ಮೀನಕೇರಿ, ಅವಿನಾಶ ಮಡಿವಾಳ, ವೆಂಕಟರೆಡ್ಡಿ ಪಾಟೀಲ, ಪ್ರದೀಪ ಪಾಟೀಲ ಹೊಸಳ್ಳಿ, ಕಾಶಿನಾಥ ದೊಡ್ಡಮನಿ, ನಚಿಕೇತ ಹರಸೂರೆ, ಹಫವಪ್ಪ ಮಾಲಿ, ಅನೀಲರೆಡ್ಡಿ ಸಂಗ್ಯಂಪಲ್ಲಿ, ರಾಜು ಜಕ್ಕನಬೋವಿ, ಮುರುಗೇಂದ್ರಸ್ವಾಮಿ, ನಾರಾಯಣ ಯಾನಾಗುಂದಿ ಇದ್ದರು.