ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರಿಗೆ ಆರೋಗ್ಯ ಕಾರ್ಡ್, ಬಸ್ ಪಾಸ್ ವಿತರಣೆಗೆ ಚಿಂತನೆ: ಮುಖ್ಯಮಂತ್ರಿ

Last Updated 4 ಜನವರಿ 2022, 8:15 IST
ಅಕ್ಷರ ಗಾತ್ರ

ಕಲಬುರಗಿ: ತಮ್ಮ ಲೇಖನಗಳ ಮೂಲಕ ‌ಸರ್ಕಾರವನ್ನು ಸದಾ ಎಚ್ಚರದ ಸ್ಥಿತಿಯಲ್ಲಿಟ್ಟಿರುವ ಗ್ರಾಮೀಣ ಪತ್ರಕರ್ತರಿಗೆ ಆರೋಗ್ಯ ‌ಕಾರ್ಡ್ ಹಾಗೂ ಬಸ್ ಪಾಸ್ ವಿತರಿಸುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಘೋಷಿಸಿದರು.

ನಗರದಲ್ಲಿ ‌ಮಂಗಳವಾರ 36ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಎಲ್ಲ ಪತ್ರಿಕೆಗಳೂ ಹಣಕಾಸಿನ ಬಿಕ್ಕಟ್ಟಿನಿಂದಾಗಿ ಮುದ್ರಣ ನಿಲ್ಲಿಸಬಾರದು ಎಂಬ ಕಾಳಜಿ ಸರ್ಕಾರಕ್ಕಿದೆ. ಆದ್ದರಿಂದ ಸರ್ಕಾರದಿಂದ ನಿರಂತರವಾಗಿ ಜಾಹೀರಾತು ಬಿಡುಗಡೆ ಮಾಡುತ್ತಿದೆ. ಪತ್ರಕರ್ತ ‌ಸಮುದಾಯಕ್ಕೆ ಇನ್ನೂ ಹೆಚ್ಚಿನ ಸವಲತ್ತುಗಳನ್ನು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ‌ಪತ್ರಕರ್ತರು ವಹಿಸಿದ ಪಾತ್ರ ಶ್ಲಾಘನೀಯ. ಅದ್ದರಿಂದ ಹಿಂದಿನ ಮುಖ್ಯಮಂತ್ರಿ, ‌ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡುವ ಪರಿಪಾಠ ಆರಂಭಿಸಿದ್ದರು. ಅದನ್ನು ಮುಂದುವರಿಸಿದ್ದೇನೆ. ಮೃತ ಪತ್ರಕರ್ತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ‌ಸಂಘದವರು ನನ್ನ ಬಳಿ ಬಂದಾಗ ಒಂದು ನಿಮಿಷವೂ ಕಾಯಿಸದೇ ಅವರಿಗೆ ಪರಿಹಾರ ಮಂಜೂರು ಮಾಡಿಕೊಟ್ಟಿದ್ದೇನೆ ಎಂದರು.

ಕೆಕೆಆರ್‌ಡಿಬಿಗೆ ₹3000 ಕೋಟಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ₹3 ಸಾವಿರ ‌ಕೋಟಿ ಹಣ ಒದಗಿಸಲು ‌ಕ್ರಿಯಾ ಯೋಜನೆ ರೂಪಿಸಲಾಗಿದೆ. ತಿಂಗಳಾಂತ್ಯದಲ್ಲಿ ಈ ಭಾಗದ ಜನಪ್ರತಿನಿಧಿಗಳನ್ನು ಕರೆಸಿಕೊಂಡು ಚರ್ಚಿಸುತ್ತೇನೆ. ಒಂದು ವರ್ಷದ ಕಾಲಾವಧಿಯಲ್ಲಿ ₹3 ಸಾವಿರ ಕೋಟಿ ‌ಖರ್ಚು ಮಾಡಲು ಒತ್ತು ಕೊಡುತ್ತೇನೆ ಎಂದರು.

ಹಿಂದೆ ಘೋಷಿಸಿದ್ದಂತೆ ಒಂದು ವಾರದಲ್ಲಿ 371 (ಜೆ) ಕೋಶವನ್ನು ಕಲಬುರಗಿಗೆ ಸ್ಥಳಾಂತರಿಸುತ್ತೇನೆ ಎಂದು ಹೇಳಿದರು.

ಶೀಘ್ರವೇ ಈ ಭಾಗದ 14 ಸಾವಿರ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವೇದಿಕೆಯ ಮೇಲೆ ಶರಣಬಸವ ಸಂಸ್ಥಾನದ ‌ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪಾ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಭಗವಂತ ಖೂಬಾ, ಸಂಸದ ಡಾ. ಉಮೇಶ ಜಾಧವ, ಸಚಿವ ಮುರುಗೇಶ ನಿರಾಣಿ, ಕೆಕೆ ಆರ್ ಡಿಬಿ ಅಧ್ಯಕ್ಷ ದತ್ತಾತ್ರೆಯ ಪಾಟೀಲ ರೇವೂರು, ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ. ಅಜಯ್ ಸಿಂಗ್, ಕಲ್ಯಾಣ‌ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ‌ಪಾಟೀಲ ತೇಲ್ಕೂರ, ಶಾಸಕರಾದ ಸುಭಾಷ್ ಗುತ್ತೇದಾರ, ಡಾ. ಅವಿನಾಶ ಜಾಧವ, ಬಸವರಾಜ ಮತ್ತಿಮಡು, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ಶಶೀಲ್ ಜಿ. ನಮೋಶಿ, ಅರಣ್ಯ ಪ್ರಾಧಿಕಾರದ ಅಧ್ಯಕ್ಷೆ ತಾರಾ ಅನುರಾಧ, ವಿಜಯ ಕರ್ನಾಟಕ ಸಂಪಾದಕ ಹರಿಪ್ರಕಾಶ ಕೋಣೆಮನೆ, ವಿಜಯವಾಣಿ ಸಂಪಾದಕ ಕೆ.ಎನ್. ಚೆನ್ನೇಗೌಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ್ ಇದ್ದರು.

ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ದಿನೇಶ್ ಅಮಿನ್ ಮಟ್ಟು, ಎಂ.ಕೆ. ಭಾಸ್ಕರರಾವ್, ಹುಣಸವಾಡಿ ರಾಜನ್, ಟಿ.ವಿ.ಶಿವಾನಂದನ್, ಜಗದೀಶ ಬುರ್ಲಬಡ್ಡಿ ಅವರಿಗೆ ರಾಜ್ಯಮಟ್ಟದ ವಿವಿಧ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT