ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯಾಯ ವಿತರಣೆಯಲ್ಲಿ ವಕೀಲರ ಪಾತ್ರ ಮಹತ್ವದ್ದು’

ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಸುನೀಲ್ ದತ್ ಯಾದವ್
Last Updated 27 ನವೆಂಬರ್ 2020, 7:24 IST
ಅಕ್ಷರ ಗಾತ್ರ

ಕಲಬುರ್ಗಿ: ವಕೀಲರು ನ್ಯಾಯಾಲಯದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ನ್ಯಾಯ ವಿತರಣೆ ವ್ಯವಸ್ಥೆಯಲ್ಲಿ ಅವರ ಪಾತ್ರ ಮಹತ್ವದ್ದು ಎಂದು ಕರ್ನಾಟಕ ಹೈಕೋರ್ಟ್ ಕಲಬುರ್ಗಿ ಪೀಠದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅಭಿಪ್ರಾಯಪಟ್ಟರು.

ಸಂವಿಧಾನ ದಿನದ ಪ್ರಯುಕ್ತ ಕಲಬುರ್ಗಿ ಪೀಠದ ಕಾನೂನು ಸೇವಾ ಸಮಿತಿ ಮತ್ತು ಗುಲಬರ್ಗಾ ವಕೀಲರ ಸಂಘದ ಸಹಯೋಗದಲ್ಲಿ ಹೈಕೋರ್ಟ್ ಆವರಣದಲ್ಲಿ ಆಯೋಜಿಸಿದ್ದ ‘ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ವಕೀಲರ ಪಾತ್ರ’ ವಿಷಯದ ಕುರಿತು ಅವರು ಮಾತನಾಡಿದರು.

ಹಲವಾರು ಕಾನೂನುಗಳು ಉದಯವಾಗಲು ವಕೀಲರ ಪಾತ್ರವೂ ಬಹುಮುಖ್ಯವಾಗಿರುತ್ತದೆ. ಪಾಕಿಸ್ತಾನದಲ್ಲಿ ಉದ್ಭವವಾಗಿದ್ದ ಕಾನೂನು ಸಂಘರ್ಷದ ಸಮಯದಲ್ಲಿ ಅಲ್ಲಿನ ವಕೀಲರ ಪ್ರತಿಭಟನೆ ಮತ್ತು ಪ್ರಯತ್ನದಿಂದಾಗಿ ಅಲ್ಲಿನ ಸಂವಿಧಾನ ಪುನರ್ ಪ್ರತಿಷ್ಠಾಪನೆಯಾಗಲು ಕಾರಣವಾಯಿತು. ಭಾರತದ ಸಂವಿಧಾನದ ಕಲಂ 226 ಹಾಗೂ 32ರಡಿ ಪರಿಹಾರ ಕೊಡಿಸುವಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ ಎಂದರು.

‘ಒಂದು ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಅನುಷ್ಠಾನಕ್ಕೆ ತರುವವರು ಉತ್ತಮರಾಗಿರದೇ ಇದ್ದರೆ ಅದು ಕೆಟ್ಟ ಸಂವಿಧಾನವಾಗುತ್ತದೆ. ಒಂದು ಸಂವಿಧಾನ ಎಷ್ಟೇ ಕೆಟ್ಟದಾಗಿದ್ದರೂ ಅದನ್ನು ಅನುಷ್ಠಾನಕ್ಕೆ ತರುವವರು ಉತ್ತಮರಾಗಿದ್ದರೆ ಅಂತಹ ಸಂವಿಧಾನ ಉತ್ತಮವಾಗಿರುತ್ತದೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದಾರೆ’ ಎಂದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಇ.ಎಸ್. ಇಂದಿರೇಶ್, ಎಂ.ಜಿ. ಉಮಾ, ಹಂಚಾಟೆ ಸಂಜೀವಕುಮಾರ, ಪಿ.ಎನ್. ದೇಸಾಯಿ, ಪಿ.ಕೃಷ್ಣ ಭಟ್ ಅವರು ಉಪಸ್ಥಿತರಿದ್ದರು.

ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ ಕಿಣ್ಣಿ ಸ್ವಾಗತಿಸಿದರು. ಕಾರ್ಯದರ್ಶಿ ಬಸವರಾಜ ಜಾಕಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT