ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯಾಯಕ್ಕಾಗಿ ಮುಖ್ಯಮಂತ್ರಿ ಬಳಿ ನಿಯೋಗ’

ಹಣಮಂತ ಹೊಸಮನಿ ಕೊಲೆ ಪ್ರಕರಣ
Last Updated 18 ಜೂನ್ 2021, 5:28 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕಲ್ಲೂರ–ಕೆ ಗ್ರಾಮದ ಬಳಿ ಈಚೆಗೆ ನಡೆದ ಹಣಮಂತ ಹೊಸಮನಿ ಕೂಡಲಗಿ ಅವರ ಕೊಲೆ ಪ್ರಕರಣ ಕುರಿತು ನಿಸ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ
ಹಾಗೂ ಗೃಹಸಚಿವರ ಬಳಿ ನಿಯೋಗ ಹೋಗಿ ಮನವಿ ಮಾಡಲಾಗುವುದು’ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ವಿಠಲ್ ದೊಡ್ಡಮನಿ ತಿಳಿಸಿದರು.

‘ತನಿಖಾಧಿಕಾರಿಯೇ ಈ ಪ್ರಕರಣದ ದಾರಿ ತಪ್ಪಿಸುತ್ತಿದ್ದಾರೆ. ಅವರನ್ನು ಜವಾಬ್ದಾರಿಯಿಂದ ಬಿಡುಗಡೆ ಮಾಡಿ, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿಕೊಡಬೇಕು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮತ್ತು ಅವರ ಸಹೋದರ ಬಸವರಾಜ ಪಾಟೀಲ ಅವರ ಹೆಸರನ್ನು ಯಾವುದೇ ಕಾರಣಕ್ಕೂ ಪ್ರಕರಣದಿಂದ ಕೈಬಿಡಬಾರದು’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಮಠಾಧೀಶರು, ವೀರಶೈವ– ಲಿಂಗಾಯತ ಮುಖಂಡರ ಒತ್ತಡಕ್ಕೆ ಮಣಿದು ಪ್ರಭಾವಿ ಮುಖಂಡರ ಹೆಸರನ್ನು ಕೈಬಿಡಬಾರದು. ತಮ್ಮದೇ ಸರ್ಕಾರವಿದೆ ಎಂಬ ಕಾರಣಕ್ಕೆ ಕೊಲೆಗೀಡಾದ ಪರಿಶಿಷ್ಟ ವ್ಯಕ್ತಿಯ ಕುಟುಂಬಕ್ಕೆ ಅನ್ಯಾಯ ಮಾಡಬಾರದು. ಸತ್ತುಹೋದ ಹಣಮಂತ ಅವರ ಕುಟುಂಬದವರಿಗೆ ರಕ್ಷಣೆ ನೀಡಬೇಕು ಎಂದೂ ನಿಯೋಗ ಆಗ್ರಹಿಸಲಿದೆ’ ಎಂದರು.

‘ಎಫ್‍ಐಆರ್‌ನಲ್ಲಿ ದೊಡ್ಡಪ್ಪಗೌಡ ಅವರ ಹೆಸರು ಕೈಬಿಡುವಂತೆ ಮಠಾಧೀಶರು ಆಗ್ರಹಿಸಿರುವುದು ಸರಿಯಲ್ಲ. ಸಮಾಜ ತಿದ್ದಬೇಕಾದ ಮಠಾಧೀಶರೇ ಆರೋಪಿಗಳ ಪರವಾಗಿ ನಿಂತರೆ ತತ್ವ ಹೇಳುವುದು ಹೇಗೆ ಸಾಧ್ಯ? ಒಂದು ವೇಳೆ ಮಠಾಧಿಪತಿಗಳ ಒತ್ತಡಕ್ಕೆ ಮಣಿದು ಹೆಸರು ಕೈಬಿಟ್ಟರೆ ಪರಿಶಿಷ್ಟ ಸಂಘಟನೆಗಳಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಮುಖಂಡ ಮಲ್ಲೇಶಿ ಸಜ್ಜನ ಹೇಳಿದರು.

ಸಂಘಟನೆಯ ಮುಖಂಡರಾದ ದೇವೇಂದ್ರ ಶೆಳ್ಳಗಿ, ಮಲ್ಲಪ್ಪ ಹೊಸಮನಿ, ಎ.ಬಿ.ಹೊಸಮನಿ, ಸೂರ್ಯಕಾಂತ ನಿಂಬಾಳಕರ, ಸುರೇಶ ಹಾದಿಮನಿ, ಸುರೇಶ ಮೆಂಗನ್, ರಾಜಕುಮಾರ ಕಪನೂರ, ವಿಶಾಲ್ ದರ್ಗಿ, ಜೈಭೀಮ ಲೆಂಗಟಿ, ಸುಭಾಷ ಚನ್ನೂರ, ಭೀಮರಾಯ ನಗನೂರ, ದೇವೇಂದ್ರ ಸಿನ್ನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT