ಚಿಂಚೋಳಿ: ಪಟ್ಟಣದಲ್ಲಿ ಲಾಕ್ಡೌನ್ನಿಂದ ಬನ್, ಬಿಸ್ಕತ್ ಹಾಗೂ ವರ್ಕಿಗಳಿಗೆ ಬೇಡಿಕೆ ಹೆಚ್ಚಾಗಿದೆ.
ಲಾಕ್ಡೌನ್ ಬಿಸಿಗೆ ತಾಲ್ಲೂಕಿನಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಅಸ್ತವ್ಯಸ್ತವಾಗಿದೆ. ಆದರೆ ಬನ್ ತಯಾರಿಕರಿಗೆ ಲಾಕ್ಡೌನ್ ವರವಾಗಿ ಪರಿಣಮಿಸಿದೆ.
ಕೊರೊನಾ ಬರುವುದಕ್ಕಿಂತ ಮೊದಲು ಇಲ್ಲಿನ ಭಾರತ ಬೇಕರಿಯಲ್ಲಿ ನಿತ್ಯ 1.25 ಕ್ವಿಂಟಲ್ ಮೈದಾ ಹಿಟ್ಟಿನಿಂದ ಬನ್, ಬಿಸ್ಕತ್ ಮತ್ತು ವರ್ಕಿ ತಯಾರಿಸುತ್ತಿದ್ದರು. ಚಿಂಚೋಳಿ ಪುರಸಭೆ ವ್ಯಾಪ್ತಿಯ ಜನವಸತಿ ಪ್ರದೇಶಗಳು ಸಹಿತ ಸುತ್ತಲಿನ ಹಳ್ಳಿಗಳಲ್ಲೂ ಮಾರಾಟ ಮಾಡಲಾಗುತ್ತಿತ್ತು. ಆದರೂ ನಿತ್ಯ ಶೇ 25ರಷ್ಟು ಸ್ಟಾಕ್ ಉಳಿಯುತ್ತಿತ್ತು.
ಈಗ ಅಷ್ಟೇ ಮೈದಾ ಹಾಗೂ ಪೂರಕ ಸಾಮಗ್ರಿ ಬಳಸಿ ಬನ್, ಬಿಸ್ಕತ್ ಹಾಗೂ ವರ್ಕಿ ತಯಾರಿಸುತ್ತಿದ್ದೇವೆ. ಮಾರಾಟಕ್ಕೆ ಪುರಸಭೆ ವ್ಯಾಪ್ತಿಗೆ ಮಾತ್ರ ಅನುಮತಿ ಸಿಕ್ಕಿದೆ. ಆದರೆ ಜನರಿಂದ ಬೇಡಿಕೆ ಹೆಚ್ಚಾಗಿದ್ದು, ಸ್ಟಾಕ್ ಉಳಿಯುತ್ತಿಲ್ಲ ಎನ್ನುತ್ತಾರೆ ಘಟಕದ ಮಾಲೀಕ ಸಯ್ಯದ್ ಹುಸೇನ್.
ಲಾಕ್ಡೌನ್ ಆರಂಭವಾದ ಮೇಲೆ ನಾವು ಘಟಕ ಮುಚ್ಚಿದ್ದೆವು. ನಂತರ ಸರ್ಕಾರ ಅನುಮತಿ ನೀಡಿದ್ದರಿಂದ ಪುರಸಭೆ ಮುಖ್ಯಾಧಿಕಾರಿ ಅಭಯಕುಮಾರ ಮತ್ತು ಡಿವೈಎಸ್ಪಿ ಈ.ಎಸ್.ವೀರಭದ್ರಯ್ಯ ಅವರ ಸಲಹೆ ಮತ್ತು ಸರ್ಕಾರದ ಷರತ್ತುಗಳನ್ನು ಪಾಲಿಸುತ್ತ ಉತ್ಪನ್ನ ತಯಾರಿಸುತ್ತಿದ್ದೇವೆ ಎಂದು ಅವರು ವಿವರಿಸಿದರು.
ಲಾಕ್ಡೌನ್ ಸಂದರ್ಭದಲ್ಲಿ ಬೇರೆ ಕಡೆಯಿಂದ ತಂದ 12 ಬನ್ಗಳ ಒಂದು ಪ್ಯಾಕೆಟ್ ₹36ಕ್ಕೆ ಮಾರಾಟ ಮಾಡುತ್ತಿದ್ದರು. ಭಾರತ್ ಬೇಕರಿ ಬನ್ ತಯಾರಿಕೆ ಘಟಕ ಆರಂಭವಾದ ಮೇಲೆ ಬೇರೆ ಕಡೆಯಿಂದ ಬನ್ಗಳು ಮಾರಾಟಕ್ಕೆ ಬರುತ್ತಿಲ್ಲ. ಭಾರತ ಬೇಕರಿಯ ಬನ್ಗಳು ಅಂಗಡಿಗಳಿಗೆ 12 ಬನ್ಗಳ ಒಂದು ಪ್ಯಾಕೆಟ್ ₹20ಕ್ಕೆ ಮಾರಾಟ ಮಾಡಲಾಗುತ್ತಿದೆ.