ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಗಳಿಗೆ ಕೊಲೆ ಬೆದರಿಕೆ: ಆರೋಪಿಗಳ ಬಂಧನಕ್ಕೆ ಒತ್ತಾಯ

Published 15 ಸೆಪ್ಟೆಂಬರ್ 2023, 15:59 IST
Last Updated 15 ಸೆಪ್ಟೆಂಬರ್ 2023, 15:59 IST
ಅಕ್ಷರ ಗಾತ್ರ

ಕಲಬುರಗಿ: ಬಸವತತ್ವ ಪ್ರಚಾರಕರಾದ ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿಯವರಿಗೆ ಕೊಲೆ ಬೆದರಿಕೆ ಪತ್ರ ಬರೆದಿರುವುದು ಮತ್ತು ಅದರ ಹಿಂದಿರುವ ಮನುವಾದಿಗಳ ನಡೆ ಖಂಡನೀಯ. ಈ ಕೃತ್ಯ ಎಸಗಿರುವವರು ಹಾಗೂ ಅದರ ಹಿಂದಿರುವ ಕೊಲೆಗಡುಕರನ್ನು ಸರ್ಕಾರ ಶೀಘ್ರ ಬಂಧಿಸಬೇಕು ಎಂದು ದುಷ್ಟ ಮನುವಾದಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಆರ್‌.ಕೆ. ಹುಡಗಿ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬುದ್ಧ, ಬಸವ, ಅಂಬೇಡ್ಕರ್‌, ಗಾಂಧೀಜಿ, ಕುವೆಂಪು ಅವರ ತತ್ವಧಾರೆಯನ್ನು ಅಂತರ್ಗತಗೊಳಿಸಿಕೊಂಡಿರುವ ಸ್ವಾಮೀಜಿಯವರಿಗೆ ಹಾಕಿರುವ ಬೆದರಿಕೆ, ಇದೇ ದಾರಿಯಲ್ಲಿ ಸರ್ವೋದ್ಧಾರದ ಆಡಳಿತ ನಡೆಸಲು ಯತ್ನಿಸುತ್ತಿರುವ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಒಡ್ಡಿರುವ ಬೆದರಿಕೆಯಾಗಿದೆ’ ಎಂದು ಹೇಳಿದರು.

‘ಬೆದರಿಕೆ ಪತ್ರ ಬರೆದಿರುವುದನ್ನು ಖಂಡಿಸಿ ನಗರದ ಜಗತ್‌ ವೃತ್ತದಲ್ಲಿರುವ ಬಸವೇಶ್ವರರ ಪ್ರತಿಮೆ ಎದುರು ಸೆ 16ರಂದು ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ಧರಣಿ ನಡೆಸಲಿದ್ದೇವೆ’ ಎಂದರು.

‘ಫ್ಯಾಸಿಸ್ಟ್‌ವಾದಿ ಮನೋಧೋರಣೆ ದೇಶದಲ್ಲಿ ಎಲ್ಲೆಡೆ ಪಸರಿಸುತ್ತಿದೆ. ಇಂತಹವರಿಂದ ಪ್ರಚೋದನೆಗೊಂಡಿರುವ ಕೊಲೆಗಡುಕ ಮನಸ್ಸುಗಳು, ದೇಶದ ಪ್ರಗತಿಪರರನ್ನು ಕೊಲೆಗೈಯ್ಯುವ ಸಂಪ್ರದಾಯವನ್ನು ಬೆಳೆಸಿಕೊಂಡಿವೆ. ತಮ್ಮನ್ನು ವಿರೋಧಿಸುವ, ಸರ್ಕಾರವನ್ನು ಪ್ರಶ್ನಿಸುವವರನ್ನು ಗುರಿಯಾಗಿಸಿಕೊಂಡಿವೆ. ಈಗಾಗಲೇ ಮಹಾರಾಷ್ಟ್ರದ ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸರೆ, ಕರ್ನಾಟಕದ ಎಂ.ಎಂ.ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್‌ ಹಾಗೂ ಲಿಂಗಣ್ಣ ಸತ್ಯಂಪೇಟ ಅವರನ್ನು ಕೊಲೆಗೈಯ್ಯಲಾಗಿದೆ. ಇದು ಈಗ ಮುಂದುವರಿದು ಪ್ರೊ.ಭಗವಾನ್‌, ಕುಂ.ವೀರಭದ್ರಪ್ಪ, ಬಂಜಗೆರೆ ಜಯಪ್ರಕಾಶ, ಪ್ರಕಾಶ್‌ರಾಜ್‌ ಅವರಿಗೆ ಕೊಲೆ ಬೆದರಿಕೆ ಪತ್ರಗಳು ಬಂದಿವೆ. ಹೀಗಾಗಿ ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.

ಬಸಣ್ಣ ಸಿಂಗೆ, ಪ್ರಭುಲಿಂಗ ಮಹಾಗಾಂವಕರ, ಅರ್ಜುನ್‌ ಭದ್ರೆ, ಮಹೇಶ ರಾಠೋಡ, ಮೆಹರಾಜ, ಆರ್.ಜಿ. ಶಟಗಾರ, ಶರಣಗೌಡ ಪಾಟೀಲ, ಶಿವಕುಮಾರ ರೇಷ್ಮಿ, ಎ.ಬಿ. ಹೊಸಮನಿ, ಅಯ್ಯನಗೌಡ ಪಾಟೀಲ, ಅಶೋಕ ಘೂಳಿ, ರವೀಂದ್ರ ಶಾಬಾದಿ, ಖಾಜಿ ರಿಜ್ವಾನ್‌ ಸಿದ್ದಿಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT