ಕಲಬುರಗಿ: ನಗರದ 55ನೇ ವಾರ್ಡಿನಲ್ಲಿ ಬರುವ ಹೈಕೋರ್ಟ್ ರಿಂಗ್ ರಸ್ತೆಯಿಂದ ಚಿಮ್ಮಲಗಿ ಕಾಲೊನಿ ಮೂಲಕ ಹಾದುಹೋಗುವ ರಾಜಕಾಲುವೆ ಮತ್ತು ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಭಾನುವಾರ ಚಾಲನೆ ನೀಡಿದರು.
‘ಮಹಾತ್ಮ ಗಾಂಧಿ ನಗರಾಭಿವೃದ್ಧಿ ಯೋಜನೆಯ ಪ್ರಸಕ್ತ ವರ್ಷದ ಅನುದಾನದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅಂದಾಜು 3.5 ಕಿ.ಮೀ.ಗೂ ಹೆಚ್ಚು ಉದ್ದದ ಈ ರಸ್ತೆಯನ್ನು ಇನ್ನಷ್ಟು ವಿಸ್ತರಣೆ ಮಾಡಿ, ಅಭಿವೃದ್ಧಿಪಡಿಸಲಾಗುವುದು. ಜತೆಗೆ ಇಕ್ಕೆಲಗಳಲ್ಲಿ ತೆರೆದ ರಾಜಕಾಲುವೆ ಇದ್ದು, ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಹಾಗಾಗಿ, ಆಧುನಿಕ ಮಾದರಿಯಲ್ಲಿ ಈ ಕಾಲುವೆಯನ್ನೂ ಸುಧಾರಣೆ ಮಾಡಲು ಉದ್ದೇಶಿಸಲಾಗಿದೆ. ಕಾಮಗಾರಿ ಗುಣಮಟ್ಟದಿಂದ ಕೂಡಿರುವಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು’ ಎಂದು ಶಾಸಕರು ಹೇಳಿದರು.
‘ಈ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಅಲ್ಲದೇ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ಕಾರಣ ಅಪಘಾತಗಳೂ ಹೆಚ್ಚುವ ಸಾಧ್ಯತೆ ಇದೆ. ಈ ಭಾಗದ ಜನ ಮೇಲಿಂದ ಮೇಲೆ ರಸ್ತೆ ಹಾಗೂ ಚರಂಡಿ ಸುಧಾರಣೆ ಬಗ್ಗೆ ಮನವಿ ಮಾಡಿದ್ದರು. ಪ್ರಸಕ್ತ ಅನುದಾನದಲ್ಲಿ ಇದಕ್ಕೆ ಪ್ರಾಧಾನ್ಯತೆ ನೀಡಲಾಗಿದೆ’ ಎಂದೂ ಅವರು ಹೇಳಿದರು.
ಮಹಾನಗರ ಪಾಲಿಕೆ ಸದಸ್ಯ ಅರ್ಚನಾ ಬಸವರಾಜ ಪಾಟೀಲ ಬಿರಾಳ, ಅಧೀಕ್ಷಕ ಎಂಜಿನಿಯರ್ ಆರ್.ಪಿ ಜಾಧವ, ಕಾರ್ಯನಿರ್ವಾಹಕ ಎಂಜಿನಿಯರ್ ಶಿವಾನಂದ ಪಾಟೀಲ, ಕಿರಿಯ ಎಂಜಿನಿಯರ್ ಸುಧೀರ ಮೇತ್ರಿ, ಕಾಲೊನಿಯ ಮುಖಂಡರಾದ ಎಸ್.ಹಿರೇಮಠ, ಬಸವರಾಜ ಪಾಟೀಲ ಬಿರಾಳ, ಅವಿನಾಶ ಕುಲಕರ್ಣಿ, ಸುರೇಶ ಕೋಳಕೂರ, ದೇವಿಂದ್ರ ನಂದಿಕೂರ, ಗುರುರಾಜ ಭರತನೂರ, ಜ್ಯೋತಿ ಪಾಟೀಲ, ಮೋನಿಕಾ ಪಂಚಾಳ ಗುತ್ತಗೇದಾರರಾದ ಎಸ್.ವೈ ಪಾಟೀಲ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.