ಅಫಜಲಪುರ: ತಾಲ್ಲೂಕಿನ ಬೋಗನಳ್ಳಿ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಮತ್ತು ಕಲಬುರ್ಗಿ ಮುಖ್ಯ ರಸ್ತೆಯಿಂದ ಗ್ರಾಮಕ್ಕೆ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಗುತ್ತಿಗೆದಾರರಿಗೆ ಗ್ರಾಮಸ್ಥರು ಸಹಕಾರ ನೀಡಿ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು ಎಂದು ಶಾಸಕ ಎಂ.ವೈ.ಪಾಟೀಲ ತಿಳಿಸಿದರು.
ತಾಲ್ಲೂಕಿನ ಬೋಗನಳ್ಳಿ ಗ್ರಾಮದಲ್ಲಿ ಗುರುವಾರ ₹ 15 ಲಕ್ಷ ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ರಸ್ತೆ ಅಭಿವೃದ್ಧಿಗಾಗಿ ₹ 1.50 ಕೋಟಿ ಅನುದಾನ ನೀಡಿದ್ದೇನೆ. ಇಷ್ಟರಲ್ಲಿಯೇ ಟೆಂಡರ್ ಆಗುತ್ತದೆ. ಸರಿಯಾಗಿ ಕೆಲಸ ಮಾಡಿಕೊಳ್ಳಿ ಮತ್ತು ಗ್ರಾಮಕ್ಕೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡಿಕೊಡಲಾಗುವದು ಎಂದು ತಿಳಿಸಿದರು.
ಮುಖಂಡ ಮನಸೂರ ಪಟೇಲ ಮಾತನಾಡಿ, ನಮ್ಮ ಗ್ರಾಮದಲ್ಲಿ ಹಿಂದೂ ಸಮಾಜದವರಿಗೆ ಸಮುದಾಯ ಭವನ, ಕರಬಸ್ತಾನಕ್ಕೆ ಕಾಂಪೌಂಡ್ ಗೋಡೆ, ಪರಿಶಿಷ್ಟ ಜಾತಿ ಅವರ ಕಾಲೊನಿಯವರಿಗೆ ಸ್ಮಶಾನ ಭೂಮಿ ಅವಶ್ಯಕತೆಯಿದೆ. ಅದನ್ನು ಶಾಸಕರು ಮಾಡಬೇಕೆಂದು ತಿಳಿಸಿದರು.
ಸಮಾರಂಭದಲ್ಲಿ ಗ್ರಾಮದ ಮುಖಂಡರಾದ ಸರ್ಧಾರ ಪಟೇಲ, ಸಾವಯವ ಕೃಷಿ ತಜ್ಞ ಲತೀಪ ಪಟೇಲ ಮದರಾ, ದತ್ತು ಸುತಾರ, ಹಸನ್ ಪಟೇಲ, ರಮೇಶ ನಿಲೇಕರ, ಗುತ್ತಿಗೆದಾರರಾದ ಹನುಮಂತರಾಯ ನೂಲೆಕರ ಇದ್ದರು.