ಕಲಬುರ್ಗಿ: ಕಮಲಾಪುರ ತಾಲ್ಲೂಕಿನ ಓಕಳಿ ಗ್ರಾಮದಲ್ಲಿ ಕೊರೊನಾ ಮಧ್ಯೆಯೂ ಮಕ್ಕಳ ಬಳಿಗೆ ತೆರಳಿ ಶಿಕ್ಷಕರು ಪಾಠ ಮಾಡಿರುವುದಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶಕುಮಾರ್, ಮುಖ್ಯಶಿಕ್ಷಕ ಸಿದ್ರಾಮಪ್ಪ ಬಿರಾದಾರ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದಾರೆ.
‘ಮಕ್ಕಳ ಮನೆ ಎದುರೇ ಶಿಕ್ಷಕರಿಂದ ನಿತ್ಯ ಪಾಠ’ ವಿಶೇಷ ವರದಿ ಪ್ರಕಟಿಸಿದ ‘ಪ್ರಜಾವಾಣಿ’ಯ ಕಾರ್ಯಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು,‘ಕಲಬುರ್ಗಿಯ ಕಮಲಾಪುರ ತಾಲ್ಲೂಕಿನ ಓಕಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ಕ್ರಮ ಅನುಕರಣೀಯ. ಕೋವಿಡ್ ಹಿನ್ನೆಲೆಯಲ್ಲಿ ಘೋಷಣೆಯಾದ ಸುದೀರ್ಘ ರಜೆ, ಮಕ್ಕಳು ಅಕ್ಷರ ಸಂಪರ್ಕದಿಂದ ದೂರಾಗುತ್ತಾರೆಂಬ ಆರೋಗ್ಯಕರವಾದ ಆತಂಕದಿಂದ ಈ ಶಿಕ್ಷಕರು ಮಕ್ಕಳ ಮನೆಮನೆಗೆ ತೆರಳಿ ಅವರು ನೆಲೆಸಿರುವ ಮನೆಗಳ ಆಸುಪಾಸಿನ ಬಯಲಿನಲ್ಲಿ ಪಾಠ ಮಾಡುತ್ತಿದ್ದಾರೆ. ಪಠ್ಯ ಬೋಧನೆಯಷ್ಟೇ ಅಲ್ಲ, ಮಕ್ಕಳಲ್ಲಿ ಕೋವಿಡ್ ಕುರಿತಾದ ಜಾಗೃತಿ ಮೂಡಿಸುತ್ತಿದ್ದಾರೆ’ ಎಂದಿದ್ದಾರೆ.
‘ಮುಖ್ಯೋಪಾಧ್ಯಾಯ ಸಿದ್ರಾಮಪ್ಪ ಬಿರಾದಾರ, ಎಸ್.ಡಿ.ಎಂ.ಸಿ ಅಧ್ಯಕ್ಷ ವೀರಣ್ಣ ಮಾಲಿಪಾಟೀಲ ಅವರಿಗೆ ಅಭಿನಂದನೆ. ಇಂತಹದೊಂದು ಸಕಾರಾತ್ಮಕ ವರದಿ ಪ್ರಕಟಿಸಿದ್ದಕ್ಕೆ ‘ಪ್ರಜಾವಾಣಿ’ಗೆ ಧನ್ಯವಾದಗಳು’ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.