ಕಾಳಗಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ಮತ್ತು ಕಾರ್ಮಿಕ ಸಂಹಿತೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ, ಆರೋಗ್ಯದ ವ್ಯಾಪಾರೀಕರಣ, ಬೆಲೆ ಏರಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ತಾಲ್ಲೂಕಿನ ವಿವಿಧ ಸಂಘಟನೆಗಳು ಸೋಮವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದವು.
ಬಸ್ ನಿಲ್ದಾಣದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರಾಂತ ರೈತ ಸಂಘ, ಕೃಷಿ ಕೂಲಿಕಾರರ ಸಂಘ, ಸಿಐಟಿಯು ಹಾಗೂ ದಲಿತ ಹಕ್ಕುಗಳ ಸಮಿತಿಯ ಕಾರ್ಯಕರ್ತರುಪ್ರತಿಭಟನಾ ಮೆರ ವಣಿಗೆ ನಡೆಸಿದರು. ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ಉಪತಹಶೀಲ್ದಾರ್ ಮಾಣಿಕ ಘತ್ತರಗಿ ಮತ್ತು ಜೆಸ್ಕಾಂ ಎಇಇ ಪವನಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.
ಅತಿವೃಷ್ಟಿಗೆ ಬೆಳೆ ಕಳೆದುಕೊಂಡ ರೈತರ ಪ್ರತಿ ಎಕರೆಗೆ ₹25ಸಾವಿರ ಪರಿಹಾರ ನೀಡಬೇಕು. ಅರಣಕಲ್ ಗ್ರಾಮದ ಕೆರೆ ಒಡೆದು ನೂರಾರು ರೈತರ ಜಮೀನು ಹಾಳಾಗಿದೆ. ಕೂಡಲೇ ಅವರಿಗೆ ಪರಿಹಾರ ಕಲ್ಪಿಸಿ, ನರೇಗಾ ಅಡಿ ಜಮೀನು ದುರಸ್ತಿಗೆ ಮುಂದಾಗಬೇಕು. ಫಸಲ್ ಬಿಮಾ ಯೋಜನೆಯ ವಿಮಾ ಕಂಪನಿಯಿಂದ ರೈತರಿಗೆ ಮೋಸ ಮಾಡುವುದು ತಡೆಯಬೇಕು. ಗಂಡೋರಿ ನಾಲಾದಿಂದ ಬೆಳೆಹಾನಿಯಾದವರಿಗೆ ಪರಿಹಾರ ಘೋಷಣೆ ಮಾಡಬೇಕು ಎಂದರು.
ಬೆಣ್ಣೆತೊರಾ ಹಿನ್ನೀರಲ್ಲಿ ಮುಳುಗಡೆ ಯಾದ ಗ್ರಾಮಗಳನ್ನು ರಾಷ್ಟ್ರೀಯ ವಿಪತ್ತು ವ್ಯಾಪ್ತಿಗೆ ಸೇರಿಸುವ ಘೋಷಣೆ ಹೊರಡಿಸಬೇಕು. ಅಲ್ಲಾಪುರ ಗ್ರಾಮದ ಮುಖ್ಯರಸ್ತೆ ನನೆಗುದಿಗೆ ಬಿದ್ದಿದ್ದು ಕೂಡಲೇ ಕಾಮಗಾರಿ ಆರಂಭಿಸಬೇಕು. ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಹಣ ಬಿಡುಗಡೆ ಮಾಡಬೇಕು ಎಂದರು.
ಕಾರ್ಮಿಕ ಸಂಹಿತೆ, ಕೃಷಿ ಕಾಯ್ದೆ ಗಳನ್ನು ಹಿಂಪಡೆಯಬೇಕು. ರೈತರ ಎಲ್ಲ ಬೆಳೆಗಳಿಗೆ ಖಾತರಿ ಖರೀದಿ ನೀಡಬೇಕು. ಸಮಗ್ರ ಉತ್ಪಾದನೆ ವೆಚ್ಚದ ಜತೆಗೆ ಶೇ 50ರಷ್ಟು ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆ ಖಾತರಿ ಲಭ್ಯವಾಗಬೇಕು. ವಟವಟಿ ಗ್ರಾಮಕ್ಕೆ ವಿದ್ಯುತ್, ನಾವದಗಿ ಗ್ರಾಮ ದಿಂದ ಚಿಂತಕೂಟ ಗ್ರಾಮಕ್ಕೆ ಬೀದಿ ದೀಪ, ಚಿಂಚೋಳಿ ಎಚ್ ಗ್ರಾಮಕ್ಕೆ ಬಸ್ ಸೌಕರ್ಯ ಒದಗಿಸುವಂತೆ ಒತ್ತಾಯಿಸಿದರು.
ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಗುರುನಂದೇಶ ಕೋಣಿನ, ಕಾಶಿನಾಥ ಬಂಡಿ, ದಿಲೀಪ ನಾಗೂರೆ, ಮಲ್ಲಮ್ಮ ಮೊಘ, ಪರಮೇಶ್ವರ ಕಾಂತಾ, ಸಿದ್ದಣ್ಣ ಕಲಶೆಟ್ಟಿ, ಗುಂಡಪ್ಪ ಅರಣಕಲ್, ಗೌರಿಶಂಕರ ಕಿಣ್ಣಿ, ಅಮೃತರಾವ ಸಿರಗೊಂಡ, ನಾಗೇಂದ್ರ ಯಾದವ, ಓಂಕಾರ ಹಾವಳಗಿ, ಯೋಗೇಶ ಹೆಬ್ಬಾಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.