ಕಲಬುರ್ಗಿ: ಮುಂಗಾರು ಹಂಗಾಮಿನ ಸಿದ್ಧತೆ ನಡೆದಿರುವ ಮಧ್ಯೆಯೇ ಜಿಲ್ಲೆಯ ವಿವಿಧೆಡೆ ರೈತರು ತಮ್ಮ ಎತ್ತುಗಳಿಗೆ ಅಲಂಕಾರ ಮಾಡಿ ಗ್ರಾಮದಲ್ಲಿ ಓಡಾಡಿಸುವ ಮೂಲಕ ಕಾರ ಹುಣ್ಣಿಮೆ ಆಚರಿಸಿದರು.
ರೈತರಿಗೆ ಕಾರ ಹುಣ್ಣಿಮೆ ವಿಶೇಷ ಹಬ್ಬವಾಗಿದ್ದು, ಕೃಷಿ ಚಟುವಟಿಕೆಗಳಲ್ಲಿ ನೆರವಾಗುವ ಎತ್ತುಗಳೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿರುತ್ತಾರೆ.
ಬೆಳಿಗ್ಗೆ ಎತ್ತುಗಳ ಮೈತೊಳೆದು ಅವುಗಳಿಗೆ ಅರಿಸಿಣ, ಕುಂಕುಮ ಹಚ್ಚಿ ಪೂಜೆ ಮಾಡುತ್ತಾರೆ. ಎತ್ತುಗಳ ಕೋಡುಗಳಿಗೆ ಬಣ್ಣ ಬಳಿಯುತ್ತಾರೆ. ಕುತ್ತಿಗೆಗೆ ಅಲಂಕಾರಿಕ ಹಗ್ಗ, ಗೊಂಡೆ ಕಟ್ಟಿ ಸಿಂಗರಿಸುತ್ತಾರೆ.
ಸಂಜೆ ಅಗ್ನಿಯಲ್ಲಿ ಹಾಯಿಸುವ ಮೂಲಕ 'ಕರಿ' ಹರಿಯುವ ಶಾಸ್ತ್ರ ಮುಗಿಸುತ್ತಾರೆ.
ಕಾರ ಹುಣ್ಣಿಮೆ ಅಂಗವಾಗಿಎತ್ತುಗಳಿಗೆ ಅಲಂಕಾರ ಮಾಡಿರುವುದು
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಸಿಹಿ ಅಡುಗೆ ತಯಾರಿಸಿ ಊಟ ಮಾಡುತ್ತಾರೆ. ಎತ್ತುಗಳ ವಿಶೇಷ ಆರೈಕೆ ಮಾಡುತ್ತಾರೆ.
ಕಾರ ಹುಣ್ಣಿಮೆ ದಿನವಾದ ಇಂದು (ಗುರುವಾರ) ಎತ್ತುಗಳಿಗೆ ಕೃಷಿ ಚಟುವಟಿಕೆಗಳಿಂದ ಬಿಡುವು ನೀಡಿದ್ದಾರೆ.