ಚಿತ್ತಾಪುರ: ತಾಲ್ಲೂಕಿನ ಇವಣಿ ಗ್ರಾಮದ ಹೊರವಲಯದಲ್ಲಿ ಶನಿವಾರ ಕುರಿಗಾಹಿಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗುಂಡಲಗೇರಾ ಗ್ರಾಮದ ನಿವಾಸಿ ಶಿವಪ್ಪ ಸಿದ್ದಪ್ಪ (28) ಕೊಲೆಯಾದವರು.
ಯಾದಗಿರಿ ಜಿಲ್ಲೆಯಿಂದ ಕೆಲವು ಕುಟುಂಬಗಳು ಕುರಿಗಳ ಹಿಂಡಿನ ಸಮೇತ ಇವಣಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಬೀಡುಬಿಟ್ಟಿದ್ದವು. ಕುರಿಗಳನ್ನು ಮೇಯಿಸುವ ಮತ್ತು ಹೊಲಗಳಲ್ಲಿ ಬೀಡು ಬಿಡುವ ವಿಷಯವಾಗಿ ಎರಡು ಕುಟುಂಬಗಳ ನಡುವೆ ಕೆಲವು ದಿನಗಳ ಹಿಂದೆ ಜಗಳವಾಗಿತ್ತು.ಅದೇ ವಿಷಯ ಶನಿವಾರ ವಿಕೋಪಕ್ಕೆ ಹೋಗಿದೆ. ಆಗ ಶಿವಪ್ಪನ ಮೇಲೆ ನಾಲ್ವರು ದಾಳಿ ಮಾಡಿ ಕಲ್ಲಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇನ್ನಿಬ್ಬರು ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ.
ಡಿವೈಎಸ್ಪಿ ಯು.ಬಿ.ಚಿಕ್ಕಮಠ, ಸಿಪಿಐ ವಿನಾಯಕ, ಪಿಎಸ್ಐ ವಿಜಯಕುಮಾರ ನಾಯಕ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು. ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.