ವಾಡಿ: ಪಟ್ಟಣ ಸಮೀಪದ ಕೊಂಚೂರಿನ ಪ್ರಸಿದ್ಧ ಹನುಮಾನ ದೇವಸ್ಥಾನದ ಜಾತ್ರೆ ನಿಮಿತ್ಯ ಗುರುವಾರ ಸಂಜೆ ರಥೋತ್ಸವ ಅದ್ಧೂರಿಯಿಂದ ಜರುಗಿತು.
ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಗುಜರಾತ್ ರಾಜ್ಯಗಳ ಭಕ್ತರು ಪಾಲ್ಗೊಂಡು ಭಕ್ತಿ ಮೆರೆದರು. ಒಂದು ವಾರದಿಂದ ನಡೆದ ಹಲವು ಧಾರ್ಮಿಕ ಕಾರ್ಯಕ್ರಮಗಳ ಅಂತಿಮ ಭಾಗವಾಗಿ ಗುರುವಾರ ಸಂಜೆ ತೇರು ಎಳೆದು ಸಂಭ್ರಮಿಸಿದರು.
ಹೂವು, ಛತ್ರಿ ಚಾಮರಗಳಿಂದ ಅಲಂಕೃತಗೊಂಡಿದ್ದ ರಥಕ್ಕೆ ಪೂಜೆ ಸಲ್ಲಿಸಿದ ನಂತರ ಹನುಮಾನ ಮಹಾರಾಜಕೀ ಜೈ ಎನ್ನುವ ಭಕ್ತರ ಜಯಘೋಷಗಳ ನಡುವೆ ರಥೋತ್ಸವ ಸಾಗಿತು. ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತುತ್ತಿ ಎಸೆದು ಭಕ್ತಿ ಸಮರ್ಪಿಸಿದರು.
ವಾಡಿ ಹಾಗೂ ಚಿತ್ತಾಪುರ ಠಾಣೆಗಳ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.