ಕಮಲಾಪುರ (ಕಲಬುರಗಿ ಜಿಲ್ಲೆ): ಪತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಪತ್ನಿಯ ಶವವನ್ನು ಆಕೆಯ ತವರು ಮನೆಗೆ ತಂದಿದ್ದು, ಪತ್ನಿಯ ಪೋಷಕರು ಕೊಲೆ ಆರೋಪ ಮಾಡಿದ್ದಾರೆ.
ಸೊಂತ ಗ್ರಾಮದ ನಿವಾಸಿ ಚಂದ್ರಕಾಂತ ಮಲ್ದಿ ಅವರ ಪುತ್ರಿ ಉಮಾಶ್ರೀ ರಾಮು ಬಿರಾದಾರ (26) ಅವರು ಸಂಶಯಾಸ್ಪದವಾಗಿ ಮೃತಪಟ್ಟಿದ್ದಾರೆ.
ಪತಿ ರಾಮು ಪತ್ನಿ ಉಮಾಶ್ರೀ ಅವರ
ಮೃತದೇಹವನ್ನು ಕಾರಿನಲ್ಲಿ ತಂದು ತವರು ಮನೆಯ ಎದುರಿಗೆ ನಿಲ್ಲಿಸಿದ್ದರು. ಕಾರು ಸಮೇತ ಮೃತ ದೇಹವನ್ನು ಕಮಲಾಪುರ ಪೊಲೀಸ್ ಠಾಣೆಗೆ ತಂದ ಪೋಷಕರು, ರಾಮು ಹಾಗೂ ಆತನ ಕೆಲ ಕುಟುಂಬ ಸದಸ್ಯರ ವಿರುದ್ಧ ಕೊಲೆ ಆರೋಪದಡಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಮಾಶ್ರಿ ಅವರನ್ನು 2018ರಲ್ಲಿ ಕಲಬುರಗಿಯ ಉಪಳಾಂವ ಕ್ರಾಸ್ ನಿವಾಸಿ ರಾಮು ಬಿರಾದಾರ ಅವರ ಜೊತೆ ವಿವಾಹ ಮಾಡಿ ಕೊಡಲಾಗಿತ್ತು. ಪತಿ ರಾಮು, ಮೈದುನ, ಅತ್ತೆ, ರಾಮು ಅವರ ಸೋದರ ಮಾವ, ಸೋದರ ಮಾವನ ಪತ್ನಿ ಸೇರಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಮೃತದೇಹವನ್ನು ತವರು ಮನೆಗೆ ತಂದಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.