ಕಲಬುರ್ಗಿ: ನಗರದ ಚೌಡೇಶ್ವರಿ ನಗರದ ರಮೇಶ ಫಿರೋಜಾಬಾದ್ ಎಂಬುವವರ ಮನೆಯಲ್ಲಿ ಶುಕ್ರವಾರ ಬೆಳಿಗ್ಗೆ ಸಿಲಿಂಡರ್ ಸ್ಫೋಟಗೊಂಡು ನಾಲ್ವರು ಗಾಯಗೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡ ಅಡುಗೆ ಕೆಲಸ ಮಾಡುತ್ತಿದ್ದ ಶಶಿಕಲಾ ಅವರನ್ನು ನಗರದ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಮೇಶ್ ಫಿರೋಜಾಬಾದ್, ಅವರ ಪುತ್ರಿ ಅಂಬಿಕಾ ಹಾಗೂ ಪುತ್ರ ಮಲ್ಲಿನಾಥ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.
ಅಡುಗೆ ಅನಿಲ ಸಿಲಿಂಡರ್ ಖಾಲಿಯಾಗಿದ್ದರಿಂದ ಬೇರೊಂದು ಸಿಲಿಂಡರ್ ಗೆ ಪೈಪ್ ಕನೆಕ್ಷನ್ ಕೊಡುವ ಸಂದರ್ಭದಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಇದರಿಂದಾಗಿ ಮನೆಯ ಬಾಗಿಲು, ಕಿಟಕಿಗಳು ಒಡೆದು ನುಚ್ಚು ನೂರಾಗಿವೆ.