ವಾಡಿ: ಸ್ಥಳೀಯ ಪುರಸಭೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಈಚೆಗೆ ಪಟ್ಟಣದಲ್ಲಿ ಕುಷ್ಠ ರೋಗ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಮಹಾತ್ಮಗಾಂಧಿ ವೃತ್ತದಿಂದ ಆರಂಭವಾದ ಮೆರವಣಿಗೆ ಪ್ರಮುಖ ವೃತ್ತಗಳ ಮೂಲಕ ಸಾಗಿ ಸಾರ್ವಜನಿಕರಲ್ಲಿ ಕುಷ್ಠ ರೋಗದ ಕುರಿತು ಅರಿವು ಮೂಡಿಸಲಾಯಿತು. ಜಾಥಾ ವೇಳೆ ಸಾಮೂಹಿಕವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಪುರಸಭೆಯ ಸಂಘಟನಾಧಿಕಾರಿ ಕಾಶೀನಾಥ ಧನ್ನಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ವಿಚಾರಕಿ ಮಂಜುಳಾ ಬುಳ್ಳ ಮಾತನಾಡಿ, 'ಕುಷ್ಠ ರೋಗದ ಬಗ್ಗೆ ಸಮಾಜದಲ್ಲಿ ವ್ಯಾಪಕ ಸುಳ್ಳುಗಳನ್ನು ಬಿತ್ತಲಾಗಿದೆ. ಕುಷ್ಠ ರೋಗಕ್ಕಿರುವ ಕಳಂಕ ಹಾಗೂ ತಾರತಮ್ಯ ಹೋಗಲಾಡಿಸಲು ಶ್ರಮಿಸಬೇಕಾಗಿದೆ' ಎಂದರು.
ಪುರಸಭೆಯ ನೈರ್ಮಲ್ಯ ಅಧಿಕಾರಿ ಶರಣಪ್ಪ ಮಡಿವಾಳ, ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಲಲಿತಾ, ಶಿವಕಾಂತಮ್ಮ, ಸುಶೀಲ ಎಲ್. ಕಟ್ಟಿ ಇದ್ದರು.