ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನಲ್ಲಿ ಮುಲ್ಲಾಮಾರಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ನದಿಪಾತ್ರದ ಗ್ರಾಮಗಳ ಮಧ್ಯೆ ಇರುವ ಸೇತುವೆಗಳು ಮುಳುಗಿ ಉಭಯ ಗ್ರಾಮಗಳ ಮಧ್ಯೆ ಸಂಪರ್ಕ ಕಡಿತವಾಗಿದೆ.
ತಾಲ್ಲೂಕಿನ ಚಿಮ್ಮನಚೋಡ, ತಾಜಲಾಪುರ, ಕನಕಪುರ, ಚಂದಾಪುರ, ಗರಗಪಳ್ಳಿ- ಭಕ್ತಂಪಳ್ಳಿ ಸೇತುವೆಗಳು ಮುಳುಗಿವೆ.
ಇದರಿಂದ ಚಿಮ್ಮನಚೋಡ ಹಳೆ ಊರು ಹೊಸ ಊರು, ತಾಜಲಾಪುರ-ಗೇಟ್ ಬಸ್ ನಿಲ್ದಾಣ, ಕನಕಪುರ ಗಾರಂಪಳ್ಳಿ, ಹಾಗೂ ಗಾರಂಪಳ್ಳಿ ಹಳೆ ಊರು ಹೊಸ ಊರು, ಗರಕಪಳ್ಳಿ-ಭಕ್ತಂಪಳ್ಳಿ ಗ್ರಾಮಗಳ ಮಧ್ಯೆ ಸಂಪರ್ಕ ಕಡಿತವಾಗಿದೆ.
ನಿರಂತರ ಸುರಿದ ಭಾರಿ ಮಳೆಯಿಂದ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿದ್ದು ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ನೀರು ನದಿಗೆ ಬಿಡಲಾಗುತ್ತಿದೆ. ಇದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿಂಚೋಳಿಯಲ್ಲಿ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಬೆಳಿಗ್ಗೆಯೇ ನದಿ ಪಾತ್ರದ ಬಡಾವಣೆಗಳಿಗೆ ತೆರಳಿ ಪರಿಸ್ಥಿತಿ ವೀಕ್ಷಿಸಿದರು.
ಚಂದ್ರಂಪಳ್ಳಿ: ಒಂದೇ ದಿನ ಮೂರು ಮೀಟರ್ ನೀರು: ಚಂದ್ರಂಪಳ್ಳಿ ಜಲಾಶಯಕ್ಕೆ ಒಂದೇ ದಿನ 3 ಮೀಟರ್ ನೀರು ಹರಿದು ಬಂದಿದೆ. ಜಲಾಶಯಕ್ಕೆ 2932 ಕ್ಯುಸೆಕ್ ಒಳ ಹರಿವಿದೆ. ಜಲಾಶಯದ ಗರಿಷ್ಠ ಮಟ್ಟ 1618 ಅಡಿಯಿದ್ದು ಶುಕ್ರವಾರ ಬೆಳಿಗ್ಗೆ 1605 ಅಡಿ ತಲುಪಿದೆ. ಭರ್ತಿಗೆ ಕೇವಲ 13 ಅಡಿ ಮಾತ್ರ ಬಾಕಿಯಿದೆ.
ಬುಧವಾರ ಜಲಾಶಯದ ನೀರಿನ ಮಟ್ಟ 1596 ಅಡಿಯಿತ್ತು. ತಾಲ್ಲೂಕಿನ ನಾಗರಾಳ ಜಲಾಶಯಕ್ಕೆ 1809 ಕ್ಯುಸೆಕ್ ಒಳ ಹರಿವು ದಾಖಲಾಗಿದ್ದು 4 ನಾಲ್ಕು ಗೇಟುಗಳನ್ನು ಎತ್ತಿ ಅಷ್ಟೇ ಪ್ರಮಾಣದ ನೀರು ಮುಲ್ಲಾಮಾರಿ ನದಿಗೆ ಬಿಡಲಾಗಿದೆ.
ಸಧ್ಯ ಜಲಾಶಯದ ನೀರಿನ 490.24 ಮೀಟರ್ ಕಾಪಾಡಲಾಗಿದ್ದು ಜಲಾಶಯದಿಂದ ರಾತ್ರಿ 3000 ಕ್ಯುಸೆಕ್ ಗಿಂತಲೂ ಹೆಚ್ಚು ನೀರು ನದಿಗೆ ಬಿಡಲಾಗಿದೆ. ಇದರಿಂದ ಹಲವು ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿದುಕೊಂಡಿವೆ.
ಓದಿ... ಚಿತ್ತಾಪುರ: ಭಾರಿ ಮಳೆಗೆ ಕಾಗಿಣಾ ಸೇತುವೆ ಮುಳುಗಡೆ, ಸಂಚಾರ ಸ್ಥಗಿತ