ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿಸಂಜೆ ಬೆಳಗಿದ ಲಕ್ಷ ದೀಪೋತ್ಸವ

ಶರಣಬಸವೇಶ್ವರರ 200ನೇ ಜಾತ್ರಾ ಮಹೋತ್ಸವ ವೈಭವ, ಉತ್ಸವಕ್ಕೆ ಚಾಲನೆ ನೀಡಿದ ಡಾ.ಶರಣಬಸವಪ್ಪ ಅಪ್ಪ
Last Updated 21 ಮಾರ್ಚ್ 2022, 5:09 IST
ಅಕ್ಷರ ಗಾತ್ರ

ಕ‌ಲಬುರಗಿ: ಕಲ್ಯಾಣ ಕರ್ನಾಟಕದ ಆರಾಧ್ಯ ದೈವ, ಮಹಾದಾಸೋಹಿ ಶರಣಬಸವೇಶ್ವರರ 200ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ನಗರದಲ್ಲಿ ಭಾನುವಾರ ಸಂಜೆ ಲಕ್ಷ ದೀಪೋತ್ಸವ ವೈಭವದಿಂದ ನೆರವೇರಿತು.

ಐತಿಹಾಸಿಕ ಮಹತ್ವ ಪಡೆದ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತಾದಿಗಳು ದೀಪಗಳನ್ನು ಬೆಳಗಿಸಿ, ಮಹಾಶರಣರಿಗೆ ಶರಣಾದರು.

ಎರಡು ವರ್ಷಗಳಿಂದ ಕೊರೊನಾ ಆತಂಕದ ಕಾರಣ ಸಂಕ್ಷಿಪ್ತವಾಗಿ ಆಚರಿಸಿದ್ದ ಈ ಜಾತ್ರಾ ಮಹೋತ್ಸವ ಈ ಬಾರಿ ಮತ್ತೆ ತನ್ನ ವೈಭವ ಮರಳಿ ಪಡೆಯಿತು. ವಿಶೇಷವಾಗಿ, ಇದೇ ವರ್ಷ ಜಾತ್ರೋತ್ಸವಕ್ಕೆ ಎರಡು ಶತಕ ಪೂರ್ಣಗೊಂಡ ಕಾರಣ ಭಕ್ತರ ಹರ್ಷ ಇಮ್ಮಡಿಗೊಂಡಿದೆ. ಜಾತ್ರೆ ಪ್ರಯು‌ಕ್ತ ಲಕ್ಷ ದೀಪೋತ್ಸವ ಆಯೋಜಿಸಿದ್ದು ಕೂಡ ಈ ಬಾರಿ ವಿಶೇಷ.

ಭಾನುವಾರ ಇಳಿಸಂಜೆ ವೇಳೆ ದೇವಸ್ಥಾನದತ್ತ ಅಪಾರ ಸಂಖ್ಯೆಯಲ್ಲಿ ಹರಿದು ಬಂದ ಜನರು ಶರಣ ಬಸವೇಶ್ವರರ ಮೂರ್ತಿ ದರ್ಶನಕ್ಕಾಗಿ ಸಾಲಿನಲ್ಲಿ ನಿಂತರು. ಕಾಯಿ, ಕರ್ಪೂರ ಅರ್ಪಿಸುವವರು, ಹರಕೆ ತೀರಿಸುವವರು, ಹೊಸದಾಗಿ ಮದುವೆಯಾದವರು, ಹರಕೆ ಕಟ್ಟುವವರು ಹೀಗೆ ಭಕ್ತರ ದಂಡೇ ಅಲ್ಲಿ ಸೇರಿತ್ತು. ಮಹಾದಾಸೋಹಿ ಪೀಠದ 8ನೇ‍ಪೀಠಾಧಿಪ‍ತಿ ಡಾ.ಶರಣಬಸವಪ್ಪ ಅಪ್ಪ ಹಾಗೂ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ದೀಪಗಳನ್ನು ಬೆಳಗುವ ಮೂಲಕ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್‌ ಡಾ.ದಾಕ್ಷಾಯಿಣಿ ಎಸ್‌. ಅಪ್ಪ,ಸೇಡಂನ ಶಿವಶಂಕರ ಮಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ,ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ ನಿಷ್ಠಿ,ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಡೀನ್‌ ಲಕ್ಷ್ಮಿ ಪಾಟೀಲ ಮಾಕಾ, ಮುಖಂಡರಾದ ಶರಣಪ್ಪ ಮುದಗಲ್, ಶಕುಂತಲಾ ಭೀಮಳ್ಳಿ ಸೇರಿ ಶರಬಸವ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಡೀನ್‌ಗಳು, ದೇವಸ್ಥಾನದ ಅರ್ಚಕ ಬಳಗ, ಅಪ್ಪ ಅವರ ಕುಟುಂಬದ ಸದಸ್ಯರು ಪಾಲ್ಗೊಂಡರು.

ದೀಪ ಬೆಳಗಿಸುತ್ತಿದ್ದಂತೆಯೇ ಭಕ್ತರಿಂದ ಜೈಕಾರಗಳು ಮೊಳಗಿದವು. ದೇವಸ್ಥಾನದ ಆವರಣದಲ್ಲಿ ಇಟ್ಟಿದ್ದ ಸಾವಿರಾರು ದೀಪಸ್ತಂಭಗಳಲ್ಲಿ ಪ್ರತಿಯೊಬ್ಬರೂ ಬತ್ತಿಗಳನ್ನು ಬೆಳಗಿಸಲು ಮುಂದಾದರು. ಹೊಸ ಬಟ್ಟೆಗಳನ್ನು ಧರಿಸಿ, ಅಲಂಕಾರ ಮಾಡಿಕೊಂಡು, ಹಣೆಗೆ ವಿಭೂತಿ ಧರಿಸಿ ಬಂದಿದ್ದ ಜನ ಬರಿಗಾಲಲ್ಲೇ ಓಡಾಡಿ ದೀಪ‍ಗಳನ್ನು ಬೆಳಗಿ ಸಂಭ್ರಮಿಸಿದರು. ಮಹಿಳೆಯರು, ಪುರುಷರು, ಯುವಕ–ಯುವತಿಯರು, ವಿದ್ಯಾರ್ಥಿಗಳು, ಹಿರಿಯರು ಗುಂಪು ಗುಂ‍ಪಾಗಿ ಬಂದು ಹಣತೆ ಹಚ್ಚಿದರು.

ಮತ್ತೆ ಹಲವರು ಕುಟುಂಬ ಸಮೇತರಾಗಿ, ಓರಿಗೆಯವರ ಜೊತೆಗೆ, ಸ್ನೇಹಿತರ ಜೊತೆಗೆ ಬಂದು ದೀಪಪೋತ್ಸವ ಸಂಭ್ರಮಿಸಿದರು. ದೀಪಸ್ತಂಭಗಳ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡವರು, ಫೋಟೊ ತೆಗೆಸಿಕೊಳ್ಳುವವರು ಎಲ್ಲರದ್ದೂ ವಿಶೇಷ ಸಂಭ್ರಮವೇ.

ಕಣ್ಮನ ಸೆಳೆದ ಸಾಂಸ್ಕೃತಿಕ ಸಂಭ್ರಮ: ದೀಪೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಆಯೋಜಿಸಿದ್ದ ಬಯಲು ಸಾಂಸ್ಕೃತಿ ಕಾರ್ಯಕ್ರಮಗಳು ಜನಮನ ಸೂರೆಗೊಂಡವು. ಶರಣಬಸವೇಶ್ವರ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ವಿದ್ಯಾರ್ಥಿನಿಯರು, ಎಸ್‌ಬಿಆರ್‌ ವಿದ್ಯಾರ್ಥಿನಿಯರು, ಎಂಜಿನಿಯರಿಂಗ್‌ ವಿಭಾಗದವರು ಭರತನಾಟ್ಯ, ಶರಣರ ವಚನ ಗಾಯನ ನಡೆಸಿಕೊಟ್ಟರು. ಅಪ್ಪ ಅವರ ಪುತ್ರಿಯರಾದ ಶಿವಾನಿ, ಭವಾನಿ ಹಾಗೂ ಮಹೇಶ್ವರಿ ಅವರು ಹಾಡಿದ ‘ಕೋಟಿಗೊಬ್ಬ ಶರಣ...’ ಪದಕ್ಕೆ ಚಪ್ಪಾಳೆಗಳ ಸುರಿಮಳೆಯಾದವು. ಅವರೊಂದಿಗೆ ವಿವಿಧ ಭಜನಾ ತಂಡದವರೂ ಶರಣರ ಲೀಲೆಗಳನ್ನು ಹಾಡಿದರು. ಒಂದೆಡೆ ಸಂಗೀತದ ನಾದ, ಇನ್ನೊಂದೆಡೆ ಲಕ್ಷ ದೀಪಗಳ ಹೊಳಪು ಎರಡೂ ಸೇರಿ ದೇವಸ್ಥಾನದ ಅವರಣದಲ್ಲಿ ಸಂಭ್ರಮ ಮನೆ ಮಾಡಿತು.

ಭಕ್ತರಿಗಾಗಿ ನಿರಂತರ ದಾಸೋಹ: ಜಾತ್ರೆಯ ಪ್ರಯುಕ್ತ ನಿರಂತರ ದಾಸೋಹ ಏರ್ಪಡಿಸಲಾಗಿದೆ. ಪ್ರತಿ ವರ್ಷದಂತೆ ಸಜ್ಜಕ, ನುಚ್ಚು, ಪಲಾವ್‌, ಅನ್ನ– ಸಾರು ಹಾಗೂ ಮಜ್ಜಿಗೆ ಈ ಬಾರಿಯ ದಿನವೂ ಇರಲಿವೆ. ‘ಪ್ರತಿ ದಿನ 20 ಕ್ವಿಂಟಲ್‌ನಷ್ಟು ಅಕ್ಕಿ ಬಳಸಲು ನಿರ್ಧರಿಸಲಾಗಿದೆ. ಯುಗಾದಿ ಬರುವವರೆಗೂ ದಾಸೋಹ ಮುಂದುವರಿಯಲಿದ್ದು, ಸುಮಾರು 200 ಕ್ವಿಂಟಲ್‌ ಅಕ್ಕಿ, 100 ಕ್ವಿಂಟಲ್‌ ಬೇಳೆ, 200 ಕ್ವಿಂಟಲ್‌ ಬೆಲ್ಲ ಸೇರಿ ಟನ್‌ಗಟ್ಟಲೇ ತರಕಾರಿಗಳನ್ನೂ ಸಂಗ್ರಹಿಸಲಾಗಿದೆ’ ಎಂದು ಕಿರಣ ಪಾಟೀಲ ಮಾಹಿತಿ ನೀಡಿದರು. ಇದರೊಂದಿಗೆ ರಥೋತ್ಸವಕ್ಕೆ ಬರುವವರಿಗೆ ಭಕ್ತರು ಸಹ ನಗರದ ಪ್ರಮುಖ ರಸ್ತೆಗಳಲ್ಲಿ ದಾಸೋಹ ಮತ್ತು ನೀರಿನ ವ್ಯವಸ್ಥೆ ಮಾಡುವುದು ಸಂಪ್ರದಾಯ. ಕೆಲವರು ಶಿರಾ, ಅನ್ನ–ಸಾಂಬಾರು ಕೊಟ್ಟರೆ ಮತ್ತೆ ಕೆಲವರು ಸೇಬು, ಕಲ್ಲಂಗಡಿ, ಬಾಳೆಹಣ್ಣು, ಸಪೋಟ ಮತ್ತಿತರ ಹಣ್ಣು, ಮಜ್ಜಿಗೆ ನೀಡುವ ಮಳಿಗೆ ಹಾಕಿಕೊಂಡಿದ್ದಾರೆ.

ಪಲ್ಲಕ್ಕಿ ಉತ್ಸವ, ತ್ರಿಕಾಲ ಪೂಜೆ

ಪ್ರತಿ ವರ್ಷದಂತೆ ಈ ಬಾರಿ ಕೂಡ ಶರಣಬಸವೇಶ್ವರರ ಪಲ್ಲಕ್ಕಿ ಉತ್ಸವಕ್ಕೂ ಅಪಾರ ಭಕ್ತರು ಸೇರಿದರು. ಜೈಕಾರ ಹಾಕುತ್ತ, ಶಂಖನಾದ ಮಾಡುತ್ತ ದೇವಸ್ಥಾನದ ಸುತ್ತ ನಡೆದ ‍ಪಲ್ಲಕ್ಕಿ ಮೆರವಣಿಗೆಯೇಜಾತ್ರೆಗೆ ಪಲ್ಲವಿ ಬರೆಯಿತು.

ಎಂದಿನಂತೆ ತ್ರಿಕಾಲ ಪೂಜೆ ನೆರವೇರಿದವು. ಪ್ರತಿ ವರ್ಷ ಹೋಳಿ ಹುಣ್ಣಿಮೆ ನಂತರ ಬರುವ 5ನೇ ದಿನ ಶರಣಬಸವೇಶ್ವರ ಜಾತ್ರೆ ನಡೆಯುತ್ತದೆ.

ರಾಜ್ಯ, ಹೊರ ರಾಜ್ಯಗಳ ಭಕ್ತರೂ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಬಾರಿ ಮೂರು ದಿನ ಮುಂಚಿತವಾಗಿಯೇ ಲಕ್ಷ ದೀಪೋತ್ಸವದ ಕಾರಣ ಬಂದು ಸೇರಿದ್ದಾರೆ.

ಭಕ್ತರಿಗಾಗಿ ನಿರಂತರ ದಾಸೋಹ

ಜಾತ್ರೆಯ ಪ್ರಯುಕ್ತ ನಿರಂತರ ದಾಸೋಹ ಏರ್ಪಡಿಸಲಾಗಿದೆ. ಪ್ರತಿ ವರ್ಷದಂತೆ ಸಜ್ಜಕ, ನುಚ್ಚು, ಪಲಾವ್‌, ಅನ್ನ– ಸಾರು ಹಾಗೂ ಮಜ್ಜಿಗೆ ಈ ಬಾರಿಯ ದಿನವೂ ಇರಲಿವೆ.

‘ಪ್ರತಿ ದಿನ 20 ಕ್ವಿಂಟಲ್‌ನಷ್ಟು ಅಕ್ಕಿ ಬಳಸಲು ನಿರ್ಧರಿಸಲಾಗಿದೆ. ಯುಗಾದಿ ಬರುವವರೆಗೂ ದಾಸೋಹ ಮುಂದುವರಿಯಲಿದ್ದು, ಸುಮಾರು 200 ಕ್ವಿಂಟಲ್‌ ಅಕ್ಕಿ, 100 ಕ್ವಿಂಟಲ್‌ ಬೇಳೆ, 200 ಕ್ವಿಂಟಲ್‌ ಬೆಲ್ಲ ಸೇರಿ ಟನ್‌ಗಟ್ಟಲೇ ತರಕಾರಿಗಳನ್ನೂ ಸಂಗ್ರಹಿಸಲಾಗಿದೆ’ ಎಂದು ಕಿರಣ ಪಾಟೀಲ ಮಾಹಿತಿ ನೀಡಿದರು.

ಇದರೊಂದಿಗೆ ರಥೋತ್ಸವಕ್ಕೆ ಬರುವವರಿಗೆ ಭಕ್ತರು ಸಹ ನಗರದ ಪ್ರಮುಖ ರಸ್ತೆಗಳಲ್ಲಿ ದಾಸೋಹ ಮತ್ತು ನೀರಿನ ವ್ಯವಸ್ಥೆ ಮಾಡುವುದು ಸಂಪ್ರದಾಯ. ಕೆಲವರು ಶಿರಾ, ಅನ್ನ–ಸಾಂಬಾರು ಕೊಟ್ಟರೆ ಮತ್ತೆ ಕೆಲವರು ಸೇಬು, ಕಲ್ಲಂಗಡಿ, ಬಾಳೆಹಣ್ಣು, ಸಪೋಟ ಮತ್ತಿತರ ಹಣ್ಣು, ಮಜ್ಜಿಗೆ ನೀಡುವ ಮಳಿಗೆ ಹಾಕಿಕೊಂಡಿದ್ದಾರೆ.

ಮಹಾ ರಥೋತ್ಸವ ನಾಳೆ

ಮಾರ್ಚ್‌ 21ರಂದು ಸಂಜೆ 5ಕ್ಕೆ ದೇವಸ್ಥಾನದ ಆವರಣದಲ್ಲೇ ಉಚ್ಚಾಯಿ (ಸಣ್ಣ ರಥ) ನಡೆಯಲಿದೆ. ಮರು ದಿನ ಅಂದರೆ; ಮಾರ್ಚ್‌ 22ರಂದು ದೇವಸ್ಥಾನ ಎದುರಿನ ಜಾತ್ರಾ ಮೈದಾನದಲ್ಲಿ ಮಹಾರಥೋತ್ಸವ ಜರುಗುವುದು. ಈ ಬಾರಿ ಎರಡು ಲಕ್ಷಕ್ಕೂ ಹೆಚ್ಚು ಜನ ರಥೋತ್ಸವಕ್ಕೆ ಸೇರಬಹುದು ಎಂದು ಸಮಿತಿಯವರು ಅಂದಾಜಿಸಿದ್ದಾರೆ.ಜಾತ್ರೆಯ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಡಾ.ಶರಣಬಸವಪ್ಪ ಅಪ್ಪ ಅವರ ಸಾನ್ನಿಧ್ಯದಲ್ಲಿ ನಡೆಯಲಿವೆ.

ಮಳಿಗೆಗಳ ಸಿದ್ಧತೆ: ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ವಿವಿಧ ರೀತಿಯ ಮಳಿಗೆಗಳನ್ನು ತೆರೆಯಲಾಗಿದೆ. ಸಿಹಿತಿನಿಸು, ಚುರುಮುರಿ, ಮಕ್ಕಳ ಆಟಿಕೆ, ಆಲಂಕಾರಿಕ ವಸ್ತುಗಳು ಮತ್ತು ಬಳೆ ಅಂಗಡಿಗಳನ್ನು ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT