ಕಲಬುರಗಿ: ಮಹಿಳಾ ಸಬಲೀಕರಣದ ಹೆಜ್ಜೆಯಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದಾಗಿ ಬಸ್ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ದೂರದ ಊರುಗಳಿಗೂ ಗಂಟೆಗಟ್ಟಲೇ ನಿಂತುಕೊಂಡೇ ಸಂಚರಿಸಬೇಕಾದ ಅನಿವಾರ್ಯತೆ ಬಂದೊದಗಿದೆ.
ಅದರಲ್ಲೂ ಬೆಳಿಗ್ಗೆ ಶಾಲೆ, ಕಾಲೇಜು, ಕಚೇರಿ, ಮಾರುಕಟ್ಟೆ ಸೇರಿದಂತೆ ಇತರೆ ದೈನಂದಿನ ಕೆಲಸಗಳಿಗೆ ತೆರಳುವವರು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸಾರಿಗೆಯನ್ನೇ ನೆಚ್ಚಿಕೊಂಡಿದ್ದು, ಕಂಡಕ್ಟರ್ ಕಾಲಿಡಲೂ ಜಾಗ ಇಲ್ಲದಷ್ಟು ಬಸ್ಗಳು ಭರ್ತಿಯಾಗುತ್ತಿವೆ. ಎಷ್ಟೋ ಸಲ ಸೀಟು ಹಿಡಿಯಲು ಮಹಿಳೆಯರ ಮಧ್ಯೆಯೇ ಜಗಳಗಳು ನಡೆದ ಉದಾಹರಣೆಗಳೂ ಇವೆ.
ಕಲಬುರಗಿಯಿಂದ ಯಾದಗಿರಿ, ಬೀದರ್, ಸೇಡಂ, ಜೇವರ್ಗಿ, ಶಹಾಪುರಕ್ಕೆ ಸಂಚರಿಸುವ ಜನ ತುಸು ಜಾಸ್ತಿ. ಬಸ್ಗಳ ರಷ್ ನೋಡಿದ ಮಹಿಳೆಯರೇ ಉಚಿತ ಪ್ರಯಾಣವನ್ನು ಬಿಟ್ಟು ಅಂತರರಾಜ್ಯ ಬಸ್ಗಳಲ್ಲಿ ಸಂಚರಿಸುವುದೂ ನಡೆದಿದೆ. ಹಣ ನೀಡಿ ಟಿಕೆಟ್ ಪಡೆದರೂ ಅಲ್ಲಿಯೂ ಸೀಟುಗಳು ಸಿಗುವುದು ದುರ್ಲಭವಾಗಿದೆ.
ಅದರಲ್ಲೂ ನಿತ್ಯ ಗ್ರಾಮೀಣ ಭಾಗದಿಂದ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರದ ಶಾಲಾ, ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ. ಬೆಳಿಗ್ಗೆ ಹಳ್ಳಿಯಿಂದ ನಗರಕ್ಕೆ ಬರುವ ಹಾಗೂ ಸಂಜೆಯ ವೇಳೆಗೆ ನಗರದಿಂದ ಹಳ್ಳಿಗಳಿಗೆ ಹೋಗುವ ಬಸ್ಗಳು ಭರ್ತಿಯಾಗಿರುತ್ತವೆ. ಇದರಿಂದಾಗಿ ಹತ್ತಾರು ಕಿಲೋ ಮೀಟರ್ ದೂರವನ್ನು ನಡೆದುಕೊಂಡೇ ಕ್ರಮಿಸಬೇಕಿದೆ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ಬಸ್ ಪ್ರಯಾಣಿಕರ ಸಂಖ್ಯೆ ಬರೀ ಶಕ್ತಿ ಯೋಜನೆಯ ಬಳಿಕವಷ್ಟೇ ಹೆಚ್ಚಾಗಿಲ್ಲ. ಕೊರೊನಾ ಸಂದರ್ಭದಲ್ಲಿ ನಗರ ಪ್ರದೇಶಗಳಲ್ಲಿ ಹೆಚ್ಚು ಉದ್ಯೋಗಾವಕಾಶಗಳು ಇರಲಿಲ್ಲ. ಹೀಗಾಗಿ, ಯಾರೂ ನಗರಗಳತ್ತ ಬರುತ್ತಿರಲಿಲ್ಲ. ಇದೀಗ ವ್ಯಾಪಾರ ವಹಿವಾಟು ಹೆಚ್ಚಾಗಿದ್ದು, ಕಟ್ಟಡ ನಿರ್ಮಾಣ ಚಟುವಟಿಕೆಗಳೂ ಗರಿಗೆದರಿವೆ. ಹೀಗಾಗಿ ಗ್ರಾಮಗಳಿಂದ ಕಟ್ಟಡ ಕೆಲಸಕ್ಕಾಗಿ ಜನರು ಬರುತ್ತಿದ್ದಾರೆ. ಅದಕ್ಕೆ ತಕ್ಕಂತೆ ಸಾರಿಗೆ ಸೌಲಭ್ಯ ಒದಗಿಸಬೇಕಿತ್ತು. ಆದರೆ, ಬಹುತೇಕ ಗ್ರಾಮಗಳಿಂದ ಬಸ್ಗಳು ಇನ್ನೂ ಮೊದಲಿದ್ದಷ್ಟು ಟ್ರಿಪ್ಗಳೇ ಹೋಗಿ ಬರುತ್ತಿವೆ. ರಾತ್ರಿ ವಸ್ತಿ ಬಸ್ಗಳೂ ಸಕಾಲಕ್ಕೆ ಹೋಗುತ್ತಿಲ್ಲ. ಇದರಿಂದಾಗಿ ವಾಪಸ್ ಗ್ರಾಮಗಳಿಗೆ ಹೋಗುವುದೂ ಆಗುತ್ತಿಲ್ಲ ಎಂಬ ಆರೋಪಗಳು ಕಲಬುರಗಿ ತಾಲ್ಲೂಕಿನ ಗ್ರಾಮಸ್ಥರಿಂದ ವ್ಯಕ್ತವಾಗಿವೆ.
ರಜಾ ದಿನಗಳನ್ನು ಹೊರತುಪಡಿಸಿ ಬಸ್ ನಿಲ್ದಾಣಗಳು ಜನರಿಂದ ತುಂಬಿ ತುಳುಕುತ್ತಿವೆ. ಅದರಲ್ಲೂ ತೀರ್ಥ ಕ್ಷೇತ್ರಗಳಾದ ಧರ್ಮಸ್ಥಳ, ಗೋಕರ್ಣ, ಸವದತ್ತಿ, ಬಸವಕಲ್ಯಾಣ, ಗಾಣಗಾಪುರ, ಘತ್ತರಗಿ ಕಡೆ ಹೋಗುವ ಹಾಗೂ ರಾಯಚೂರು, ಬೀದರ್, ವಿಜಯಪುರ ಕಡೆ ಹೋಗುವ ಬಸ್ಗಳಲ್ಲಿ ಸದಾ ದಟ್ಟಣೆ ಇರುತ್ತದೆ.
‘ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಇತ್ತೀಚೆಗೆ 621 ಬಸ್ಗಳನ್ನು ಖರೀದಿಸಿದ್ದು, ಬಹುತೇಕ ಬಸ್ಗಳು ಬೇಡಿಕೆ ಹೆಚ್ಚಾಗಿರುವ ಹಾಗೂ ವರಮಾನ ತರುವ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಹೆಚ್ಚು ಪ್ರಯಾಣಿಕರು ಸಂಚರಿಸುವ ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಹೆಚ್ಚುವರಿ ಬಸ್ಗಳನ್ನು ಓಡಿಸಬೇಕು’ ಎನ್ನುತ್ತಾರೆ ಕಲಬುರಗಿಯ ಕರುಣೇಶ್ವರ ನಗರದ ನಿವಾಸಿ, ಸಂಗೀತ ಪ್ರಾಧ್ಯಾಪಕಿ ಲಕ್ಷ್ಮಿ ಶಂಕರ ಜೋಶಿ.
ವಿಜಯಪುರ, ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳಲ್ಲಿಯೂ ಗ್ರಾಮೀಣ ಪ್ರದೇಶಗಳಿಗೆ ಬಸ್ ಸೌಲಭ್ಯ ಸಮರ್ಪಕವಾಗಿಲ್ಲ. ಹೀಗಾಗಿ, ಅಗತ್ಯವಿರುವಷ್ಟು ಬಸ್ಗಳನ್ನು ಬಿಡಬೇಕು ಎಂದು ಪ್ರಯಾಣಿಕರು ಆಗ್ರಹಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.