ಕಲಬುರಗಿ: ಪತ್ನಿಯನ್ನು ಕೊಲೆ ಮಾಡಿದ ಆರೋಪ ಸಾಬೀತು ಆಗಿದ್ದರಿಂದ ಇಲ್ಲಿನ 1ನೇ ಹೆಚ್ಚುವರು ಮತ್ತು ಸೆಷೆನ್ಸ್ ನ್ಯಾಯಾಲಯವು ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಬಸವ ನಗರದ ನಿವಾಸಿ ಸೈಯದ್ ಇಬ್ರಾಹಿಂ 2021ರ ಅಕ್ಟೋಬರ್ 19ರಂದು ಸಾರಾಯಿ ಕುಡಿದು ಬಂದು ಪತ್ನಿ ಜತೆಗೆ ಗಲಾಟೆ ಮಾಡಿದ್ದ. ಸಾರಾಯಿ ಕುಡಿದು ಮನೆಗೆ ಏಕೆ ಬಂದಿದ್ದೀಯಾ ಎಂದು ಕೇಳಿದ ಪತ್ನಿ ನಸೀಮಾ ಬೇಗಂ ಮೇಲೆ ಹಲ್ಲೆ ಮಾಡಿ, ಅವಾಚ್ಯವಾಗಿ ಬೈದು, ಬ್ಲೇಡ್ನಿಂದ ಆಕೆಯ ಕುತ್ತಿಗೆಗೆ ಗಾಯಗೊಳಿಸಿದ್ದ. ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ನಸೀಮಾ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.
ಆರೋಪಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಯ ಪಿಐ ದಿಲೀಪ್ ಕುಮಾರ್ ಸಾಗರ್ ಅವರು ತನಿಖೆ ನಡೆಸಿದ್ದರು. ನಾನಾ ಕಾಯ್ದೆಗಳ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಹ ಸಲ್ಲಿಸಿದ್ದರು.
ವಾದ ವಿವಾದ ಆಲಿಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮೋಹನ ಬಾಡಗಂಡಿ ಅವರು ಸೈಯದ್ ಇಬ್ರಾಹಿಂಗೆ ವಿವಿಧ ಷೆಕ್ಷನ್ಗಳ ಅಡಿಯಲ್ಲಿ 5 ವರ್ಷ ಜೈಲು ಶಿಕ್ಷೆ ಮತ್ತು ₹20 ಸಾವಿರ ದಂಡ ವಿಧಿಸಿ ತೀರ್ಪು ಹೊರಡಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ಆರ್. ನರಸಿಂಹಲು ಅವರು ವಾದ ಮಂಡಿಸಿದರು. ಮಹಿಳಾ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ದಾಮೋದರ್, ಕಾನ್ಸ್ಟೆಬಲ್ಗಳಾದ ಸವಿತಾ ಮತ್ತು ಗೀತಾ ಅವರು ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಹಾಜರಿಪಡಿಸಿದರು.